ಹೊಸಪೇಟೆ: ಪ್ರತಿವರ್ಷ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದಂದು ತಾಲ್ಲೂಕಿನಲ್ಲಿ ಅತ್ಯುತ್ತಮ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಲು ಇಲ್ಲಿನ ಆಶ್ರಯ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಧುಸೂದನ್ ಅವರು ಗುರುವಾರ ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ₹60,000 ಚೆಕ್ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ, ಸಮನ್ವಯ ಅಧಿಕಾರಿ ಗುರುರಾಜ್ ಅವರಿಗೆ ಚೆಕ್ ಹಸ್ತಾಂತರಿಸಿದರು.
‘ಸಾವಿತ್ರಿಬಾಯಿ ಫುಲೆ ಅವರು ಮಹಿಳೆಯರ ಸಾಕ್ಷರತೆಗೆ ಸಾಕಷ್ಟು ಶ್ರಮಿಸಿದ್ದಾರೆ. ಪ್ರತಿ ವರ್ಷ ಜನವರಿ 3ರಂದು ಸರ್ಕಾರ ಅವರ ಜನ್ಮದಿನ ಆಚರಿಸುತ್ತಿರುವುದು ಉತ್ತಮ ನಿರ್ಧಾರ. ಆ ದಿನ ತಾಲ್ಲೂಕು ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ 20 ವರ್ಷ ಸೇವೆ ಸಲ್ಲಿಸಿದ ಉತ್ತಮ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಬೇಕು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ₹60,000 ಹಣ ನೀಡಿದ್ದು, ಶಾಶ್ವತ ನಿಧಿ ಸ್ಥಾಪಿಸಿ ಅದರ ಬಡ್ಡಿಯಲ್ಲಿ ಶಿಕ್ಷಕ ಸಮುದಾಯ ಹಾಗೂ ಶಿಕ್ಷಕರ ಸಂಘದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಮಾಡುವಂತೆ ಕೋರಲಾಗಿದೆ. ಅದಕ್ಕೆ ಸ್ಪಂದನೆ ಸಿಕ್ಕಿದೆ’ ಎಂದು ಮಧುಸೂದನ್ ತಿಳಿಸಿದ್ದಾರೆ.
ಶಿಕ್ಷಕರ ಸಂಘದ ರತ್ನಮ್ಮ, ಚಂದ್ರಶೇಖರ್, ಸುಧಾ, ರೇಣುಕಾ ಟಪಾಲ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ ಕೆ. ವೀರಭದ್ರೇಶ್ವರ, ಶಿಕ್ಷಕರಾದ ವರಪ್ರಸಾದ್, ಹೇಮರೆಡ್ಡಿ, ಎಲ್.ಪಿ. ನಾಗರಾಜ್, ರವೀಂದ್ರ, ಆರ್.ಕೆ. ರವಿ ಇದ್ದರು.