ಹೊಸಪೇಟೆ (ವಿಜಯನಗರ): ಇಲ್ಲಿನ ತುಂಗಭದ್ರಾ ಜಲಾಶಯದ ಮೂರು ಕ್ರಸ್ಟ್ಗೇಟ್ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದರಿಂದ ಇದುವರೆಗೆ ಅವುಗಳ ಮೂಲಕ ನೀರು ಹರಿಸಲು ಸಾಧ್ಯವಾಗಿಲ್ಲ.
ಅಣೆಕಟ್ಟೆ ಒಟ್ಟು 33 ಕ್ರಸ್ಟ್ಗೇಟ್ಗಳನ್ನು ಹೊಂದಿದೆ. ಗೇಟ್ ಸಂಖ್ಯೆ 1, 21 ಹಾಗೂ 33ರಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದು, ಇದುವರೆಗೆ ಅದರ ಮೂಲಕ ನೀರು ಹರಿಸಲು ಆಗಿಲ್ಲ. ‘ಎಂಜಿನಿಯರ್ಗಳು ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ದುರಸ್ತಿಗೆ ತೊಡಕಾಗಿದೆ. ಜಲಾಶಯಕ್ಕೆ 1.49 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರು ನದಿಗೆ ಹರಿಸಲಾಗುತ್ತಿದೆ. 105.788 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 95.086 ನೀರಿನ ಸಂಗ್ರಹವಿದೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮಕರಬ್ಬಿ–ಬ್ಯಾಲಹುಣ್ಣಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಹಿರೇಬನ್ನಿಮಟ್ಟಿ, ಚಿಕ್ಕಬನ್ನಿಮಟ್ಟಿ, ಹರಪನಹಳ್ಳಿ ತಾಲ್ಲೂಕಿನ ತಾವರಗುಂದಿ, ನಿಟ್ಟೂರು ಗ್ರಾಮದಲ್ಲಿ ನೂರಾರು ಎಕರೆ ಬೆಳೆ ಜಲಾವೃತವಾಗಿದೆ.