ನ್ಯಾಮತಿ: ಸಮೀಪದ ಆರುಂಡಿ ಗ್ರಾಮದಲ್ಲಿ ಹಣಕ್ಕಾಗಿ ಪೀಡಿಸುತ್ತಿದ್ದ ಪತಿಯನ್ನು ಕುಡುಗೋಲಿನಿಂದ ಕೊಲೆ ಮಾಡಿದ ಪತ್ನಿ, ಶವವನ್ನು ಮನೆಯ ಹಿಂಭಾಗದ ಶೌಚಾಲಯ ಗುಂಡಿಯಲ್ಲಿ ಹಾಕಿರುವ ಕೃತ್ಯ ವರದಿಯಾಗಿದೆ.
ಕೊಲೆ ಭಾನುವಾರ ನಡೆದಿತ್ತು. ಬಂಗಿ ನರಸಿಂಹಪ್ಪ (45) ಕೊಲೆಯಾದ ವ್ಯಕ್ತಿ. ಅವರ ಮೂರನೇ ಪತ್ನಿ ರೇಣುಕಾ (25) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ನರಸಿಂಹಪ್ಪ ಪ್ರತಿದಿನ ಕುಡಿದು ಬಂದು ಹಣಕ್ಕಾಗಿ ಪೀಡಿಸುತ್ತಿದ್ದ. ಇದರಿಂದ ರೋಸಿಹೋಗಿದ್ದ ರೇಣುಕಾ ಭಾನುವಾರ ಕೊಲೆ ಮಾಡಿದ್ದಾರೆ ಎಂದು ಹೊನ್ನಾಳಿ ಪೊಲೀಸ್ ವೃತ್ತ ನಿರೀಕ್ಷಕ ಜೆ.ರಮೇಶ್ ತಿಳಿಸಿದರು.
ಕೊಲೆ ಸಂಬಂಧ ಮೃತ ನರಸಿಂಹಪ್ಪನ ಸಹೋದರಿಯ ಮಗ ಹನುಮಂತಪ್ಪ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದಾಗ ಪತ್ನಿಯೇ ಕೊಲೆ ಮಾಡಿರುವುದು ಬಯಲಾಗಿದೆ.