ಹೊಸಪೇಟೆ: ‘ಸಂತಕವಿ ಸರ್ವಜ್ಞನ ತ್ರಿಪದಿಗಳಲ್ಲಿ ಜ್ಞಾನದ ಬೆಳಕಿದೆ’ ಎಂದು ಶಿಕ್ಷಕ ಕೆ. ಬಸವರಾಜ ತಿಳಿಸಿದರು.
ತಾಲ್ಲೂಕು ಆಡಳಿತ ಹಾಗೂ ಕುಂಬಾರ ಸಮಾಜದಿಂದ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತಿಯಲ್ಲಿ ಉಪನ್ಯಾಸ ನೀಡಿದರು.
‘ಸರ್ವಜ್ಞ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಹೊಂದಿದ್ದಾರೆ. ಇವರ ತ್ರಿಪದಿಗಳಲ್ಲಿ ರಸಮಯವಾದ ಸುಭಾಷಿತವಿದೆ. ಖುಷಿ ನಗೆಯ ಸರಸ ಸಲ್ಲಾಪವಿದೆ. ಜ್ಞಾನಿಗಳ ದಿವ್ಯ ಪರಂಪರೆಯ ಪ್ರಕಾಶವಿದೆ. ಸಮಾಜದ ಅಂಕು ಡೊಂಕು ತಿದ್ದುತ್ತ ಮನುಷ್ಯ ಸನ್ಮಾರ್ಗದತ್ತ ಸಾಗುವ ಚಿಂತನಾ ಲಹರಿ ಕಾಣಬಹುದು’ ಎಂದು ಹೇಳಿದರು.
‘ಅವರ ತ್ರಿಪದಿಗಳು ಸರ್ವಕಾಲಕ್ಕೂ ಸಲ್ಲುವಂತಹವು. ಕನ್ನಡ ಸಾಹಿತ್ಯದಲ್ಲಿ ಚಿರಂತನ ಸ್ಥಾನ ಪಡೆದಿವೆ. ಇವರು ತಮಿಳಿನ ತಿರುವಳ್ಳವರ್, ತೆಲುಗಿನ ವೇಮನರಂತೆ ಕನ್ನಡದ ಪ್ರಖ್ಯಾತ ಕವಿಯಾಗಿದ್ದಾರೆ. ತ್ರಿಪದಿಗಳಲ್ಲಿನ ಸಾರ ಪ್ರತಿಯೊಬ್ಬರೂ ಅರಿತು ನಡೆದರೆ ನವಸಮಾಜ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ’ ಎಂದರು.
ತಹಶೀಲ್ದಾರ್ಎಚ್. ವಿಶ್ವನಾಥ್ ಉದ್ಘಾಟಿಸಿದರು. ಶಿಕ್ಷಣ ಪರಿವೀಕ್ಷಕ ಬಸವರಾಜ ಜತ್ತಿ, ಕುಂಬಾರ ಸಮಾಜದ ಅಧ್ಯಕ್ಷ ಕೆ. ಹುಲುಗಪ್ಪ, ಉಪಾಧ್ಯಕ್ಷ ಸುಡುಗಾಡೆಪ್ಪ ಇದ್ದರು.