ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ದಿನೇ ದಿನೇ ಹೆಚ್ಚಾಗುತ್ತಲೇ ಇದೆ.ಗುರುವಾರ 19,644 ಕ್ಯುಸೆಕ್ ಒಳಹರಿವು ದಾಖಲಾಗಿದ್ದು, 19.87 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹವಾಗಿದೆ. 1,750 ಕ್ಯುಸೆಕ್ ನೀರು ಹೊರಗೆ ಬಿಡಲಾಗುತ್ತಿದೆ.
ಬುಧವಾರ 13,550 ಕ್ಯುಸೆಕ್ ಒಳಹರಿವು ದಾಖಲಾಗಿತ್ತು. 18.34 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹವಿತ್ತು. ಒಂದೇ ದಿನದಲ್ಲಿ ಒಂದು ಟಿ.ಎಂ.ಸಿ. ಅಡಿಗೂ ಹೆಚ್ಚು ನೀರು ಹರಿದು ಬಂದಿದೆ.
ಮಂಗಳವಾರ 8,521 ಕ್ಯುಸೆಕ್ ಒಳಹರಿವು ಇತ್ತು.17.34 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹವಿತ್ತು. ಹೀಗೆ ದಿನದಿಂದ ದಿನಕ್ಕೆ ಒಳಹರಿವು ಹೆಚ್ಚಾಗುವುದರೊಂದಿಗೆ ನೀರಿನ ಸಂಗ್ರಹ ಮಟ್ಟವೂ ಏರಿಕೆಯಾಗುತ್ತಿದೆ.
‘ಶಿವಮೊಗ್ಗದ ಗಾಜನೂರು ಸಮೀಪದ ತುಂಗಾ ಜಲಾಶಯದಿಂದ ನೀರು ಹರಿಸುತ್ತಿರುವುದು, ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇನ್ನೂ ಕೆಲವು ದಿನಗಳ ವರೆಗೆ ಇದೇ ರೀತಿಯಲ್ಲಿ ನೀರು ಹರಿದು ಬರುವ ಸಾಧ್ಯತೆ ಇದೆ’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಮೂಲಗಳು ತಿಳಿಸಿವೆ.
ಜಲಾಶಯದಲ್ಲಿ ನೀರಿನ ಸಂಗ್ರಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ರೈತ ಸಮುದಾಯದ ಸಂತಸಕ್ಕೆ ಕಾರಣವಾಗಿದೆ. ನಿಧಾನವಾಗಿ ತುಂಗಭದ್ರೆಗೆ ಜೀವ ಕಳೆ ಬರುತ್ತಿದ್ದು, ಅಣೆಕಟ್ಟೆ, ಹಿನ್ನೀರಿಗೆ ನಿತ್ಯ ನೂರಾರು ಜನ ಭೇಟಿ ಕೊಡುತ್ತಿದ್ದಾರೆ.