ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು, ಹೊರಹರಿವು ಬುಧವಾರ ಸ್ವಲ್ಪ ಪ್ರಮಾಣದಲ್ಲಿ ತಗ್ಗಿದೆ.
ಸದ್ಯ ಅಣೆಕಟ್ಟೆಗೆ 1,52,100 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 1,54,000 ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಮಂಗಳವಾರ 1,55,431 ಕ್ಯುಸೆಕ್ ಒಳಹರಿವು, 1,75,000 ಕ್ಯುಸೆಕ್ ಹೊರಹರಿವು ಇತ್ತು.
ನದಿಯಲ್ಲಿ ನೀರಿನ ಹರಿವು ತಗ್ಗಿದರೂ ಇನ್ನೂ ತಾಲ್ಲೂಕಿನ ಹಂಪಿ ಪುರಂದರ ಮಂಟಪ, ವಿಜಯನಗರದ ಕಾಲದ ಕಾಲು ಸೇತುವೆ, ಚಕ್ರತೀರ್ಥ ನೀರಿನಲ್ಲೇ ಇವೆ. ರಾಮ ಲಕ್ಷ್ಮಣ ದೇವಸ್ಥಾನ ಭಾಗಶಃ ಮುಳುಗಡೆಯಾಗಿದೆ.
ಸತತ ನಾಲ್ಕೈದು ದಿನಗಳಿಂದ ಸುರಿಯುತ್ತಿದ್ದ ಮಳೆ ಬುಧವಾರ ಸ್ವಲ್ಪ ಬಿಡುವು ನೀಡಿದೆ. ದಿನವಿಡೀ ಬಿಸಿಲು ಇತ್ತು. ಸಂಜೆ ಕೆಲ ನಿಮಿಷ ಅಲ್ಲಲ್ಲಿ ತುಂತುರು ಮಳೆಯಾಗಿದೆ.