ಬಳ್ಳಾರಿ:‘ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಕ್ಕೆ ಸೇರಿದ 7 ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯದ ಅಮೃತ ಮಹೋತ್ಸವ ಏ.25 ರಂದು ನಗರದ ಬಿಡಿಎಎ ಸಭಾಂಗಣದಲ್ಲಿ ನಡೆಯಲಿದೆ’ ಎಂದು ತುಂಗಭದ್ರರೈತ ಸಂಘದ ಅಧ್ಯಕ್ಷ ಪುರುಷೋತ್ತಮಗೌಡ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹೋತ್ಸವವನ್ನು ಸರ್ಕಾರ ಹಮ್ಮಿಕೊಳ್ಳಬೇಕಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪಾಠ ಕಲಿಸುವ ಉದ್ದೇಶದಿಂದ ಸಂಘವೇ ಹಮ್ಮಿಕೊಂಡಿದೆ’ಎಂದರು.
‘ಹಂಪಿ ಹೇಮಕೂಟದ ಸಂಗನಬಸವ ಸ್ವಾಮಿ ಸಾನಿಧ್ಯ ವಹಿಸಲಿದ್ದಾರೆ. ನಂದಿಪುರದ ಮಹೇಶ್ವರ ಸ್ವಾಮಿ ನೇತೃತ್ವ, ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾದ್ ಮನೋಹರ್ ಅಧ್ಯಕ್ಷತೆವಹಿಸಲಿದ್ದಾರೆ’ಎಂದರು.
‘ರೈತರು ಎಚ್ಚೆತ್ತುಕೊಳ್ಳದಿದ್ದರೆ ಜಲಾಶಯದ ನೀರು ಕೇವಲ ಕುಡಿಯುವುದಕ್ಕೆ ಮಾತ್ರ ಸೀಮಿತವಾಗುತ್ತದೆ. ಮಹೋತ್ಸವದಲ್ಲಿ ಹಲವಾರು ವಿಚಾರಗಳ ಕುರಿತು ಚರ್ಚೆ ನಡಯಲಿದೆ’ ಎಂದರು.
ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಜಲಾಶಯದಲ್ಲಿ ಕರ್ತವ್ಯ ನಿರ್ವಹಿಸಿದ ಹಳೆ ಅಧಿಕಾರಿಗಳೊಂದಿಗೆ ಜಲಾಶಯದ ಹೂಳೆತ್ತುವ ಬಗ್ಗೆ ಚರ್ಚೆಯೂ ನಡೆಯಲಿದೆ.
ಸಂಘದ ಮೂರು ರಾಜ್ಯ ಘಟಕದ ಅಧ್ಯಕ್ಷರೊಂದಿಗೆ ಸಂಗನಬಸವ ಸ್ವಾಮಿ ನೇತೃತ್ವದಲ್ಲಿ ಹೂಳೆತ್ತುವ ಬಗ್ಗೆ ಚರ್ಚೆಯನ್ನು ಏರ್ಪಡಿಸಲಾಗುವುದು ಎಂದರು.
ಗಂಗಾವತಿ ವೀರೇಶ್, ಜಾಲಹಳ್ಳಿ ಶ್ರೀಧರ್, ವೀರನಗೌಡ, ಭೀಮನಗೌಡ ಇದ್ದರು.