ಹೊಸಪೇಟೆ: ‘ವಿಜಯನಗರ ಜಿಲ್ಲೆ ರಚನೆಗೊಂಡ ನಂತರ ಅದಕ್ಕಿರುವ 371 (ಜೆ) ವಿಶೇಷ ಮೀಸಲು ಸೌಲಭ್ಯ ಹೋಗುತ್ತದೆ ಎಂಬ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪನವರ ಹೇಳಿಕೆ ದಾರಿ ತಪ್ಪಿಸುವಂತಹದ್ದು ಹಾಗೂ ಕುತಂತ್ರದಿಂದ ಕೂಡಿದೆ’ ಎಂದು ವಿಜಯನಗರ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕ ವೈ. ಯಮುನೇಶ ಟೀಕಿಸಿದ್ದಾರೆ.
‘ಕಲಬುರ್ಗಿ ಜಿಲ್ಲೆ ವಿಭಜನೆಗೊಂಡು ಹೊಸದಾಗಿ ಯಾದಗಿರಿ ಜಿಲ್ಲೆ ಅಸ್ತಿತ್ವಕ್ಕೆ ಬಂದಿದೆ. ಅದು 371(ಜೆ) ಸೌಲಭ್ಯದಿಂದ ವಂಚಿತವಾಗಿಲ್ಲ. ಹೀಗಿರುವಾಗ ವಿಜಯನಗರ ಜಿಲ್ಲೆಗೇಕೆ ಆ ಸೌಲಭ್ಯ ಕೈತಪ್ಪುತ್ತದೆ. ಅಖಂಡ ಬಳ್ಳಾರಿ ವಿಭಜಿಸಿ ಹೊಸದಾಗಿ ಅಸ್ತಿತ್ವಕ್ಕೆ ಬರುವ ವಿಜಯನಗರ ಜಿಲ್ಲೆ ಕಲ್ಯಾಣ ಕರ್ನಾಟಕದಲ್ಲಿಯೇ ಇರುತ್ತದೆ. ಹಾಗಾಗಿ ಕಲ್ಯಾಣ ಕರ್ನಾಟಕದ ಎಲ್ಲ ಸೌಲಭ್ಯಗಳು ವಿಜಯನಗರ ಜಿಲ್ಲೆಗೆ ಸಿಗುತ್ತವೆ’ ಎಂದು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಒಂದುವೇಳೆ ವಿಜಯನಗರ ಜಿಲ್ಲೆ ಮಾಡದಿದ್ದರೆ ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳಿಗೆ ಅನ್ಯಾಯವಾಗುತ್ತದೆ. ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿ ಜಿಲ್ಲೆ ರಚನೆ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಅಖಂಡ ಬಳ್ಳಾರಿ ಜಿಲ್ಲೆ ಪರ ಹೋರಾಟಗಾರರು ಹೂವಿನಹಡಗಲಿ ತಾಲ್ಲೂಕಿನ ಗಡಿ ಗ್ರಾಮಗಳಾದ ಮೈಲಾರ, ಹರವಿ, ಕುರುವತ್ತಿ ಗ್ರಾಮಗಳು ಹಾವೇರಿಗೆ ಸಮೀಪವಾಗಿದ್ದು, ಆ ಗ್ರಾಮಗಳನ್ನು ಹಾವೇರಿಗೆ ಸೇರಿಸಬೇಕು ಎಂಬ ಅವರ ಹೇಳಿಕೆ ಸ್ವಾರ್ಥ, ಅಪಕ್ವ ಮನಃಸ್ಥಿತಿ ತೋರಿಸುತ್ತದೆ’ ಎಂದು ಟೀಕಿಸಿದ್ದಾರೆ.