ಹೊಸಪೇಟೆ (ವಿಜಯನಗರ): ಬಾನಂಗಳದಲ್ಲಿ ಬಾಣ ಬಿರುಸುಗಳ ಚಿತ್ತಾರ, ಕಿವಿಗಡಚ್ಚಿಕ್ಕುವ ಸಂಗೀತ, ಎಲ್ಲೆಡೆ ವಿದ್ಯುತ್ ದೀಪಗಳ ಹೊನಲು, ಖ್ಯಾತ ಗಾಯಕರ ಹಾಡಿಗೆ ಕುಣಿದು ಕುಪ್ಪಳಿಸಿದ ಜನ, ತಡರಾತ್ರಿ ವರೆಗೆ ಕಾರ್ಯಕ್ರಮ ಕಣ್ತುಂಬಿಕೊಂಡ ಮಂದಿ...
ವಿಜಯನಗರ ಜಿಲ್ಲಾ ಉತ್ಸವದ ಎರಡನೇ ದಿನವಾದ ಭಾನುವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಂಡು ಬಂದ ದೃಶ್ಯಗಳಿವು. ಒಂದುವರೆ ವರ್ಷದಿಂದ ಮನೆಯಲ್ಲೇ ಕುಳಿತು ಬೇಸತ್ತಿದ್ದ ಜನತೆಗೆ ಎರಡು ದಿನಗಳ ಕಾರ್ಯಕ್ರಮ ಮುದ ನೀಡಿತು. ಮತ್ತೆ ಅವರಲ್ಲಿ ಹೊಸ ಚೈತನ್ಯ ತುಂಬಿದ ವರ್ಣರಂಜಿತ ಕಾರ್ಯಕ್ರಮವು ಭಾನುವಾರ ತಡರಾತ್ರಿ ವಿಧ್ಯುಕ್ತ ತೆರೆ ಕಂಡಿತು.
ಇದಕ್ಕೂ ಮುನ್ನ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು, ‘ನಾನೇ ರಾಜಕುಮಾರ್, ಬೊಂಬೆ ಹೇಳುತೈತೆ, ನೀನೇ ರಾಜಕುಮಾರ್’ ಎಂಬ ಗೀತೆಯೊಂದಿಗೆ ವೇದಿಕೆ ಮೇಲೆ ಕಾಣಿಸಿಕೊಂಡಾಗ ಕರತಾಡನ ಮುಗಿಲು ಮುಟ್ಟಿತ್ತು. ಬಳಿಕ ‘ಕರ್ನಾಟಕದ ಇತಿಹಾಸದಲ್ಲಿ’ ಗೀತೆ ಹಾಡಲು ಶುರು ಮಾಡಿದಾಗ ಜನ ಹುಚ್ಚೆದ್ದು ಕುಣಿದರು. ನಂತರ ‘ಓಂ ಶಿವಾಯ’ ಗೀತೆ ಹಾಡಿ ಭಕ್ತಿಯಲ್ಲಿ ತೇಲುವಂತೆ ಮಾಡಿದರು.
ಇದಕ್ಕೂ ಮುನ್ನ ಗಾಯಕಿಯರಾದ ಅನುರಾಧಾ ಭಟ್, ಶಮಿತಾ ಮಲ್ನಾಡ್ ಕನ್ನಡ ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು. ತಡರಾತ್ರಿ ಸಿಡಿಮದ್ದು ಸುಡುವ ಕಾರ್ಯಕ್ರಮದೊಂದಿಗೆ ತೆರೆ ಬಿತ್ತು.