ಪ್ರಜೆಗಳು ನೀಡಿದ ಮತವನ್ನು ಸ್ವೀಕರಿಸಿ, ಅದಕ್ಕೆ ಪೂರಕವಾಗಿ ಸರ್ಕಾರ ನಡೆಸಬೇಕೆಂಬುದೇ ಪ್ರಜಾತಂತ್ರದ ಆಶಯವಾಗಿದೆ. ಸರ್ಕಾರವು ಜನಾದೇಶದಂತೆ ನಡೆಯುತ್ತಿರಬೇಕು. ನಮ್ಮ ದೇಶದ ಜನತೆಗೆ ಅಗತ್ಯವಾಗಿ ಮತ್ತು ಸಕಾಲಕ್ಕೆ ಬೇಕಾದ ಆಹಾರ, ವಸತಿ, ಶಿಕ್ಷಣ, ನೀರು, ಬೆಳಕು, ಔಷಧಿ ಇತ್ಯಾದಿ ಸೌಲಭ್ಯಗಳನ್ನು ನೀಡುವುದು ಮತ್ತು ಅದರ ಬಗ್ಗೆ ಸಮರ್ಪಕ ಅರಿವು, ಹಂಚಿಕೆ ಎಲ್ಲವನ್ನೂ ಸರ್ಕಾರ ಒದಗಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ಆಯಾ ಪ್ರದೇಶದ ಪರವಾಗಿ ಮತದಾನದ ಮೂಲಕ ಯೋಗ್ಯ ಪ್ರತಿನಿಧಿಗಳನ್ನು ಆರಿಸಿ, ಸರ್ಕಾರ ನಡೆಸಲು ಕಳಿಸುವ ಗುರುತರ ಹೊಣೆಗಾರಿಕೆ ಎಲ್ಲರ ಮೇಲಿದೆ.