ಹೊಸಪೇಟೆ: ‘ಯುವಕರಿಂದ ಮಾತ್ರ ಬದಲಾವಣೆ ಸಾಧ್ಯ. ಹಾಗಾಗಿ ಯುವಕರಿಗೆ ಚುನಾವಣೆಯಲ್ಲಿ ಅವಕಾಶ ಗೆಲ್ಲಿಸಿ, ಬದಲಾವಣೆಗೆ ಮತ ಕೊಡಬೇಕು’ ಎಂದು ಪಕ್ಷೇತರ ಅಭ್ಯರ್ಥಿ ಕಿಚಿಡಿ ಕೊಟ್ರೇಶ್ ಮನವಿ ಮಾಡಿದರು.
ವಿಜಯನಗರ ಕ್ಷೇತ್ರದ ಉಪಚುನಾವಣೆ ನಿಮಿತ್ತ ಮಂಗಳವಾರ ನಗರದಲ್ಲಿ ಅಮರಾವತಿಯಲ್ಲಿ ಪ್ರಚಾರ ಕೈಗೊಂಡ ವೇಳೆ ಮಾತನಾಡಿದರು.
‘ಸಮಾಜ ಹಾಗೂ ರಾಜಕೀಯದಲ್ಲಿ ಬದಲಾವಣೆ ಬರಬೇಕೆಂದು ಬಯಸುತ್ತೀರಿ. ಆದರೆ, ಅಂತಹ ಬದಲಾವಣೆ ತರುವ ಸಾಮರ್ಥ್ಯ ಹೊಂದಿರುವ ಯುವಕರನ್ನು ಆರಿಸುವುದಿಲ್ಲ. ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆಗಳು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂಬ ಒಂದೇ ಕಾರಣಕ್ಕೆ ಚುನಾವಣೆಗೆ ನಿಂತಿದ್ದೇನೆ. ನನ್ನನ್ನು ಬೆಂಬಲಿಸಬೇಕು’ ಎಂದು ಕೋರಿದರು.
‘ಸತತ ಮೂರು ಸಲ ಒಬ್ಬರೇ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಅವರ ಕೆಲಸ ಕಾರ್ಯಗಳನ್ನು ನೋಡಿದ್ದೀರಿ. ಒಂದು ಸಲ ನನಗೆ ಅವಕಾಶ ಕೊಟ್ಟು ನೋಡಿ’ ಎಂದು ಕೇಳಿದರು.
ಕಾರ್ಯಕರ್ತರಾದ ಅರುಣ್, ಗವಿಸಿದ್ದ, ಕನಕಪ್ಪ, ಗುರುರಾಜ್, ವೆಂಕಟೇಶ್, ಮಂಜುನಾಥ, ಪಂಪಾ, ಅಂಜಿನಿ, ರಮೇಶ್, ಹನುಮಂತ, ಜಡೇಶ್, ಕಿಚಿಡಿ ನವೀನ್, ಗುಜ್ಜಲ್ ನಾಗೇಂದ್ರ, ಸೂರಿ ಬಂಗಾರು, ರಾಮಕೃಷ್ಣ ಇದ್ದರು.