ಹೊಸಪೇಟೆ: ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದ ಹಿನ್ನೆಲೆಯಲ್ಲಿ ತಾಲ್ಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿಸರದಲ್ಲಿ ಸೋಮವಾರ ಕೊಳವೆಬಾವಿ ಕೊರೆಸಿ ಅದಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ.
ಕೊಳವೆಬಾಯಿಯಿಂದ ನೀರು ಚಿಮ್ಮುತ್ತಿರುವುದನ್ನು ನೋಡಿದ ವಿಶ್ವವಿದ್ಯಾಲಯದ ವಸತಿ ನಿಲಯದ ವಿದ್ಯಾರ್ಥಿನಿಯರು ಖುಷಿಪಟ್ಟರು. ಈ ವೇಳೆ ಕುಲಪತಿ ಪ್ರೊ. ಸ.ಚಿ. ರಮೇಶ ಅಲ್ಲಿಯೇ ಇದ್ದರು.
‘ಕಮಲಾಪುರದ ದಾನಿಯೊಬ್ಬರ ನೆರವಿನಿಂದ ಈ ಕೊಳವೆಬಾವಿ ಕೊರೆಸಲಾಗಿದೆ. ಸದ್ಯ ನೀರಿನ ಸಮಸ್ಯೆ ನೀಗಿದೆ’ ಎಂದು ಸ.ಚಿ. ರಮೇಶ ಹೇಳಿದರು. ಬಳಿಕ ಅವರು ‘ಅನಿಕೇತನ’ ವಸತಿ ನಿಲಯಕ್ಕೆ ಭೇಟಿ ನೀಡಿ, ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆ ಪರಿಶೀಲಿಸಿದರು. ಕೆಲಹೊತ್ತು ವಿದ್ಯಾರ್ಥಿಗಳ ಕುಂದು ಕೊರತೆ ಆಲಿಸಿದರು.