ಬಳ್ಳಾರಿ: 'ಇಲ್ಲಿನ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಶೀಘ್ರ ಘೋಷಿಸಲಾಗವುದು. ಏಪ್ರಿಲ್ 15ರಂದು ಕೋರ್ ಕಮಿಟಿ ಸಭೆ ನಡೆಯಲಿದೆ. ಅಲ್ಲಿ ಅಭ್ಯರ್ಥಿ ಆಯ್ಕೆ ಅಂತಿಮಗೊಳ್ಳಲಿದೆ' ಎಂದು ಕ್ಷೇತ್ರದ ಉಸ್ತುವಾರಿ ಜಗದೀಶ್ ಶೆಟ್ಟರ್ ತಿಳಿಸಿದರು.
ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಬಿ.ಶ್ರೀರಾಮುಲು ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ' ಎಂದರು.
'ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಉಪಚುನಾವಣೆಯಲ್ಲಿ ಸೋತಿದ್ದ ಬಿಜೆಪಿ ನಂತರ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆದ್ದಿತ್ತು. ಬಳ್ಳಾರಿಯಲ್ಲಿ ಲೋಕಸಭೆ ಉಪಚುನಾವಣೆಯಲ್ಲಿ ಸೋತರೂ ಈಗಿನ ಚುನಾವಣೆಯಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ದೇಶದಲ್ಲಿ ನರೇಂದ್ರ ಮೋದಿ ಎದುರು ಇತರರ ಸ್ಪರ್ಧೆ ನಡೆಯಲಿದೆ. ಮಹಾಘಟಬಂಧನ್ ಪ್ರತಿಪಾದಕರು ರಾಹುಲ್ ಗಾಂಧಿಯನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಹೇಳಲು ಸಿದ್ಧರಿಲ್ಲ. ಬಿಜೆಪಿಯಲ್ಲಿ ಪ್ರಧಾನಿ ಹುದ್ದೆಗೆ ಮೋದಿ ಅವರ ಏಕೈಕ ಹೆಸರು ಇದೆ' ಎಂದರು.
'ರಾಜ್ಯದ ಸಮ್ಮಿಶ್ರ ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲ. ಕ್ಷೇತ್ರಗಳನ್ನು ಬಿಟ್ಟುಕೊಡುವ ವಿಚಾರದಲ್ಲಿ ಗೊಂದಲಗಳಿವೆ' ಎಂದರು.
'ಸುಮಲತಾ ಅವರ ಕುರಿತ ಹೇಳಿಕೆಗೆ ವಿರೋಧ ವ್ಯಕ್ತವಾದರೂ ಸಚಿವ ಎಚ್. ಡಿ. ರೇವಣ್ಣ ಏಕೆ ಕ್ಷಮೆ ಕೇಳುತ್ತಿಲ್ಲ. ಅವರ ಭಂಡತನಕ್ಕೆ ಮಂಡ್ಯದ ಜನ ತಕ್ಕ ಉತ್ತರ ನೀಡಲು ಸಜ್ಜಾಗಿದ್ದಾರೆ. ಹಾಸನದಲ್ಲಿ ಎ.ಮಂಜು ಕೂಡ ಮೈತ್ರಿ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದಾರೆ' ಎಂದರು.
'ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಬೆಂಬಲ ವಾಪಸ್ ಪಡೆಯಬಹುದು ಅಥವಾ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಿ ಮೈತ್ರಿಯಿಂದ ಹೊರಬಹುದು' ಎಂದು ಭವಿಷ್ಯ ನುಡಿದರು.
'ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಕುಮಾರಸ್ವಾಮಿಯವರಿಗೆ ತೊಂದರೆ ಎದುರಾಗುತ್ತಿರಲಿಲ್ಲ' ಎಂದರು.
ಸಂಘಟನೆ ಹಾಗೂ ಚುನಾವಣೆ ಸಿದ್ಧತೆಗಾಗಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಪಡೆ ಸಿದ್ಧವಾಗಿದೆ ಎಂದರು.
ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಎಂ.ಎಸ್.ಸೋಮಲಿಂಗಪ್ಪ, ಮುಖಂಡರಾದ ರಾಮಲಿಂಗಪ್ಪ, ಅಮರನಾಥ ಪಾಟೀಲ, ಮೃತ್ಯುಂಜಯ ಜಿನಗ ಇದ್ದರು.