ಹೊಸಪೇಟೆ: ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ ಯುವಜನೋತ್ಸವದ ಪ್ರಯುಕ್ತ ಬುಧವಾರ ನಗರದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಮೆರವಣಿಗೆ ಜರುಗಿತು.
ಕಾಲೇಜು ಯುವಕರು ಶ್ರೀ ಕೃಷ್ಣದೇವರಾಯ, ಶ್ರೀಕೃಷ್ಣನ ವೇಷಧಾರಿಗಳಾಗಿ ಗಮನ ಸೆಳೆದರೆ, ಯುವತಿಯರು ಇಳಕಲ್ ಸೀರೆ ಧರಿಸಿ, ಕೈಯಲ್ಲಿ ಹೆಣೆದ ಬುಟ್ಟಿ ಹಿಡಿದುಕೊಂಡು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಕಾಲೇಜು ರಸ್ತೆ ಮೂಲಕ ಹಾದು ವಿಜಯನಗರ ಕಾಲೇಜು ಎದುರಿನ ಮೈದಾನದ ಬಳಿ ಕೊನೆಗೊಂಡಿತು. ಬಾಗಲಕೋಟೆ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ರಾಜ್ಯದ ಒಂಬತ್ತು ತೋಟಗಾರಿಕೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮೀಪದ ಮುನಿರಾಬಾದ್ ತೋಟಗಾರಿಕೆ ಕಾಲೇಜಿನಲ್ಲಿ ಯುವಜನೋತ್ಸವಕ್ಕೆ ಬುಧವಾರ ಚಾಲನೆ ನೀಡಲಾಗಿದ್ದು, ಡಿ. 5ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಬುಧವಾರ ಯುವಜನೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ಡಿ. 5ರ ವರೆಗೆ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.