ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಕ್ಯಾಂಟೀನ್‌ಗೆ ನಿವೇಶನ ತೊಡಕು

Last Updated 7 ಫೆಬ್ರುವರಿ 2018, 7:02 IST
ಅಕ್ಷರ ಗಾತ್ರ

ಮದ್ದೂರು: ಪಟ್ಟಣದ ತೋಟಗಾರಿಕೆ ಇಲಾಖೆ ಫಾರಂ ಆವರಣದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸುವ ಚಿಂತನೆಗೆ ಪರ–ವಿರೋಧ ವ್ಯಕ್ತವಾವಾಗಿದೆ. ಮಂಗಳವಾರ ವಿವಿಧ ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು.

ಕ್ಯಾಂಟೀನ್ ಅನ್ನು ತೋಟಗಾರಿಕೆ ಫಾರಂ ಆವರಣದಲ್ಲಿಯೇ ಕ್ಯಾಂಟೀನ್‌ ಆರಂಭಿಸಬೇಕು ಎಂದು ಆಗ್ರಹಪಡಿಸಿ ಪುರಸಭೆ ಸದಸ್ಯ, ಕೆಲ ಸಂಘಟನೆಗಳ ಮುಖಂಡರು ಪ್ರತಿಭಟನೆ ಮಾಡಿದರು.

ಭ್ರಷ್ಟಾಚಾರ ವಿರೋಧಿ ಸಂಘಟನೆ ಕಾರ್ಯಕರ್ತೆ ಪ್ರಿಯಾಂಕಾ ಅಪ್ಪುಗೌಡ ಅವರು, ಕ್ಯಾಂಟೀನ್‌ ಆರಂಭಿಸಲು ತೋಟಗಾರಿಕೆ ಇಲಾಖೆ ಆವರಣವೇ ಸೂಕ್ತ’ ಎಂದು ಪ್ರತಿಪಾದಿಸಿದರು.

ಈ ಸ್ಥಳದ ಹತ್ತಿರದಲ್ಲಿಯೇ ತಾಲ್ಲೂಕು ಕಚೇರಿ, ಪುರಸಭೆ, ನ್ಯಾಯಾಲಯ, ಪೋಲೀಸ್ ಠಾಣೆ, ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ, ತೋಟಗಾರಿಕೆ ಇಲಾಖೆ, ಆಸ್ಪತ್ರೆ, ಬಸ್ ನಿಲ್ದಾಣವಿದೆ. ಪ್ರತಿನಿತ್ಯ ಅಸಂಖ್ಯ ಗ್ರಾಮೀಣ ಜನರು ಓಡಾಡುತ್ತಾರೆ. ಕನಿಷ್ಠ ದರದಲ್ಲಿ ಅವರಿಗೆ ಊಟ ದೊರೆತರೆ ಅನುಕೂಲ. ಇಲ್ಲಿಯೇ ಕ್ಯಾಂಟೀನ್‌ ತೆರೆಯಬೇಕೆಂದು ಆಗ್ರಹಿಸಿದರು.

ಪುರಸಭಾ ಸದಸ್ಯ ಉಮೇಶ್‌ಕುಮಾರ್‌, ಮುಖಂಡರಾದ ಅಂಬರೀಷ್‌, ಮನು, ವರುಣ್ ಗೌಡ, ಶಂಕರ್, ಅಕ್ಷಯ್, ಮಂಜು, ವಿಕಾಸ್, ಇನ್ನೂ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿರೋಧಿಸಿ ಪ್ರತಿಭಟನೆ

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಹಾಗೂ ತೆಂಗು ಬೆಳೆಗಾರರ ಸಂಘ ಸೇರಿ ವಿವಿಧ ಸಂಘಟನೆಗಳ ಸದಸ್ಯರು ‘ಯಾವುದೇ ಕಾರಣಕ್ಕೂ ತೋಟಗಾರಿಕೆ ಫಾರಂ ಆವರಣದಲ್ಲಿ ಕ್ಯಾಂಟೀನ್‌ ಆರಂಭಿಸಬಾರದು’ ಎಂದು ಆಗ್ರಹಿಸಿ ಪ್ರತಿಭಟನೆ ಮಾಡಿದರು.

ನಗರಕೆರೆ ಗ್ರಾ.ಪಂ ಮಾಜಿ ಅಧ್ಯಕ್ಷ ನ.ಲಿ.ಕೃಷ್ಣ ಅವರು, ತೋಟಗಾರಿಕೆ ಫಾರಂ ರೈತರ ಪಾಲಿಗೆ ಜೀವನಾಡಿ. ಸಸ್ಯಗಳ ಉತ್ಪಾದನೆ ಹಾಗೂ ಉಚಿತ ವಿತರಣೆಯ ಸ್ಥಳ. ಇಲ್ಲಿ ಕ್ಯಾಂಟೀನ್ ಆರಂಭ ಸೂಕ್ತವಲ್ಲ’ ಎಂದರು.

‘ಪಟ್ಟಣದಲ್ಲಿ ಸಾಕಷ್ಟು ಸ್ಥಳಾವಕಾಶವಿದೆ. ಕ್ಯಾಂಟೀನ್‌ಗೆ ಬೇರೆ ಕಡೆ ಸ್ಥಳ ಗುರುತಿಸಲಿ. ಇಲ್ಲದಿದ್ದಲ್ಲಿ ತಾಲ್ಲೂಕು ರೈತರ ಜೊತೆಗೂಡಿ ಉಗ್ರ ಹೋರಾಟ ಅನಿವಾರ್ಯ’ ಎಂದು ಎಚ್ಚರಿಕೆ ನೀಡಿದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ವಿ.ಸಿ. ಉಮಾಶಂಕರ್, ತಾಲ್ಲೂಕು ಘಟಕದ ಅಧ್ಯಕ್ಷ ತಿಪ್ಪೂರು ರಾಜೇಶ್, ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಲಕ್ಷ್ಮಣ್ ಚನ್ನಸಂದ್ರ, ಮ.ನ.ಪ್ರಸನ್ನಕುಮಾರ್, ಬಿ.ವಿ.ಹಳ್ಳಿ ಬಸವರಾಜು, ವಿಶ್ವ, ವೀರಪ್ಪ, ಜಗದೀಶ್, ಗುಂಡ ಮಹೇಶ್, ಯಾಕೂಬ್ ಹಾಗೂ ಇತರ ಸದಸ್ಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT