ಬೆಂಗಳೂರು: ಎಂಟನೇ ತರಗತಿ ಪಾಸ್ ಆಗಿರುವ ಜಿ.ಟಿ.ದೇವೇಗೌಡರಿಗೆ ಉನ್ನತ ಶಿಕ್ಷಣ ಇಲಾಖೆ ಜವಾಬ್ದಾರಿ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸ್ವಾರಸ್ಯಕರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
‘ಖಾತೆ ಹಾಗೂ ಓದಿಗೆ ಸಂಬಂಧ ಇಲ್ಲದವರು ಈ ಹಿಂದೆಯೂ ಅಧಿಕಾರ ನಡೆಸಿದ್ದಾರೆ’ ಎಂದು ಖಾತೆ ನೀಡಿದ್ದನ್ನು ಬೆಂಬಲಿಸಿಕೆಲವರು ಪೋಸ್ಟ್ಗಳನ್ನು ಹಾಕಿದ್ದರೆ, ಇನ್ನು ಕೆಲವರು
ಟೀಕಿಸಿದ್ದಾರೆ.
ಶಿಕ್ಷಣದ ಪ್ರಾಮುಖ್ಯತೆಯನ್ನು ಅವರು ಈಗ ಅರಿತಿರಬಹುದು, ಹೀಗಾಗಿ ಖಾತೆಯನ್ನು ಉತ್ತಮವಾಗಿ ನಿರ್ವಹಿಸುವ ಸಾಧ್ಯತೆ ಇದೆ ಎಂದು ಜಯಪ್ರಕಾಶ್ ಎನ್ನುವವರು ಫೇಸ್ಬುಕ್ ಪೋಸ್ಟ್ವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಪ್ರಕಾಶ್ ಎಂಬುವವರು ದೇವೇಗೌಡರ ವಿದ್ಯಾರ್ಹತೆ ಕುರಿತು ಮಾಡಿರುವ ಪೋಸ್ಟ್ಗೆ ಅನೇಕರು ಪ್ರತಿಕ್ರಿಯಿಸಿದ್ದು, ‘ಖಾತೆ ಸಿಕ್ಕ ನಂತರ ಅವರೂ ಉನ್ನತ ಶಿಕ್ಷಣ ಪಡೆಯುವ ಆಲೋಚನೆ ಮಾಡಬಹುದು’ ಎಂದು ಮುರಳೀಧರ್ ಕುಟುಕಿದ್ದಾರೆ.
‘ಎಂಟನೇ ತರಗತಿ ಓದಿರುವ ಗೌಡ್ರು ರಾಜ್ಯಕ್ಕೆ ಯಾವ ರೀತಿಯ ಉನ್ನತ ಶಿಕ್ಷಣದ ನೀತಿಗಳನ್ನು ರೂಪಿಸುತ್ತಾರೆ? ಅನೈತಿಕ ಮೈತ್ರಿಗಳಲ್ಲಿ ಇoಥವೇ ಜಾಸ್ತಿ’ ಎಂದು ನಾಗರಾಜ್ ಟೀಕೆ ಮಾಡಿದ್ದಾರೆ.
‘ಸಹಿ ಮಾಡಲು ಬಂದರೆ ಸಹಿ ಮಾಡಿ. ಇಲ್ಲದಿದ್ದರೆ ಹೆಬ್ಬೆಟ್ಟಿದೆಯಲ್ಲ, ಒತ್ತಿದರಾಯಿತು. ಇದಕ್ಕೆ ವಿದ್ಯಾರ್ಹತೆ ಅಥವಾ ಸಾಮರ್ಥ್ಯ ಏಕೆ ಬೇಕು?’ಎಂದು ಹಂಗಲೂರು ಶ್ರೀನಿವಾಸ್
ವ್ಯಂಗ್ಯವಾಡಿದ್ದಾರೆ.
ದೇವೇಗೌಡರ ಖಾತೆ ಕುರಿತು ನಡೆಯುತ್ತಿರುವ ಚರ್ಚೆಗೆ ಉತ್ತರಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ‘ನಾನು ಓದಿರುವುದೇನು, ಮುಖ್ಯಮಂತ್ರಿಯಾಗಿಲ್ಲವೇ’ ಎಂದಿದ್ದಾರೆ. ಈ ಅಭಿಪ್ರಾಯವನ್ನು ಟ್ವೀಟ್ ಮಾಡಿರುವ ರಗಸನೂರ್ ಎಂಬುವವರು, ನಗುವಿನ ಎಮೊಜಿ ಹಾಕಿದ್ದಾರೆ.
ಶೈಕ್ಷಣಿಕವಾಗಿ ಮುಂದಿರುವ ರಾಜ್ಯದಲ್ಲಿ 8ನೇ ತರಗತಿ ಓದಿದವರು ಉನ್ನತ ಶಿಕ್ಷಣ ಸಚಿವರಾಗುತ್ತಾರೆ. ವಿದ್ಯಾವಂತರು ಮತದಾನದ ದಿನ ರಜೆಯ ಮಜಾ ಅನುಭವಿಸುವುದರಿಂದ ಈ ರೀತಿ ಆಗುತ್ತದೆ ಎಂದು ನಿಯಾನ್ ಟ್ವೀಟ್ ಮಾಡಿದ್ದಾರೆ.