ಬೆಂಗಳೂರು: ನಗರದಲ್ಲಿ ವಾಹನ ದಟ್ಟಣೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು 12 ಕಾರಿಡಾರ್ ರಸ್ತೆಗಳನ್ನು ನಿರ್ಮಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಎಚ್ಎಎಲ್ ವಿಮಾನ ನಿಲ್ದಾಣ ರಸ್ತೆಯಲ್ಲಿ ಸುರಂಜನ್ದಾಸ್ ಜಂಕ್ಷನ್ ಕೆಳಸೇತುವೆಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಗರದಲ್ಲಿ ಹೊಸದಾಗಿ ಐದು ಸಂಚಾರ ಪೊಲೀಸ್ ಠಾಣೆ ಸ್ಥಾಪಿಸಿ, ಒಬ್ಬರು ಡಿಸಿಪಿ, ಸಿಬ್ಬಂದಿ, ವಾಹನ ಹಾಗೂ ಎಲ್ಲಾ ಸಲಕರಣೆಗಳನ್ನು ಸರ್ಕಾರ ಒದಗಿಸುತ್ತಿದೆ. ವಾಹನ ದಟ್ಟಣೆಯನ್ನು ಸಂಪೂರ್ಣ ನಿಯಂತ್ರಿಸಲಾಗುತ್ತದೆ ಎಂದರು.
ಸುರಂಜನ್ದಾಸ್ ಜಂಕ್ಷನ್ ಕೆಳಸೇತುವೆ ಮೂಲಕ ವೈಟ್ಫೀಲ್ಡ್ನಿಂದ ಎಂ.ಜಿ. ರಸ್ತೆಯವರೆಗೆ ಸಂಚಾರ ಸುಗಮವಾಗಲಿದೆ. ನಗರ ಅತಿ ವೇಗದಲ್ಲಿ ಬೆಳೆಯುತ್ತಿದ್ದು, ಪ್ರತಿನಿತ್ಯ 5 ಸಾವಿರ ವಾಹನಗಳು ಹೊಸದಾಗಿ ರಸ್ತೆಗಿಳಿಯುತ್ತವೆ. ಬೆಂಗಳೂರಿನಲ್ಲಿ ದಿನವೂ 10 ಲಕ್ಷ ಜನ ಬಂದುಹೋಗುತ್ತಾರೆ. ಸಂಚಾರ ಸುಗಮಗೊಳಿಸಲು ಅಲ್ಪಾವಧಿ ಹಾಗೂ ದೀರ್ಘಾ ವಧಿ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.