ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ಮಚ್ಚು ಲಾಂಗುಗಳು ಝಳಪಿಸಿದ್ದು, ಕೋಣನಕುಂಟೆಯ ವೀವರ್ಸ್ ಕಾಲೊನಿಯಲ್ಲಿ ಬುಧವಾರ ರಾತ್ರಿ ಇಬ್ಬರು ರೌಡಿಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ತಮಿಳುನಾಡಿನ ಮುರುಗನ್ ಹಾಗೂ ಪಳನಿ ಕೊಲೆಯಾದವರು. ವೀವರ್ಸ್ ಕಾಲೊನಿಯಲ್ಲಿ ನೆಲೆಸಿದ್ದ ಇವರಿಬ್ಬರು, ರಾತ್ರಿ 11 ಗಂಟೆ ಸುಮಾರಿಗೆ ಪಾನಮತ್ತರಾಗಿ ಮನೆಗೆ ನಡೆದು ಹೋಗುತ್ತಿದ್ದರು.
ಈ ವೇಳೆ ಎರಡು ಆಟೊಗಳಲ್ಲಿ ಬಂದು ಅವರನ್ನು ಅಡ್ಡಗಟ್ಟಿದ ಎಂಟು ಮಂದಿ ದುಷ್ಕರ್ಮಿಗಳು, ಮಚ್ಚು ಲಾಂಗುಗಳಿಂದ ಕೊಚ್ಚಿ ಹಾಕಿದ್ದಾರೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ರೌಡಿ ಮಂಜುನಾಥ ಅಲಿಯಾಸ್ ಬಿಟಿಎಸ್ ಮಂಜನ ಗ್ಯಾಂಗ್ ಈ ಕೃತ್ಯ ಎಸಗಿದೆ ಎಂದು ಹೇಳಲಾಗುತ್ತಿದ್ದು, ಕೋಣನಕುಂಟೆ ಪೊಲೀಸರು ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕಳೆದ ತಿಂಗಳು ಪಳನಿ ಮಗಳ ಹುಟ್ಟುಹಬ್ಬವಿತ್ತು. ಮನೆಯಲ್ಲೇ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿದ್ದ ಪಳನಿ, ಸುತ್ತಮುತ್ತಲ ಪುಡಿ ರೌಡಿಗಳನ್ನೆಲ್ಲ ಆಹ್ವಾನಿಸಿದ್ದ. ಆದರೆ, ಬಿಟಿಎಸ್ ಮಂಜನನ್ನು ಕರೆದಿರಲಿಲ್ಲ. ಈ ವಿಚಾರವಾಗಿಯೂ ಮಂಜ ಪಳನಿಯ ಮೇಲೆ ಸಿಟ್ಟಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.