ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿ ಇರುವವರ ನೆರವಿಗೆ ಮುಂದಾಗಿರುವ ಆರ್ಎಸ್ಎಸ್(ರಾಷ್ಟ್ರೀಯ ಸ್ವಯಂಸೇವಕ ಸಂಘ), ದಕ್ಷಿಣ ಕರ್ನಾಟಕ ಪ್ರಾಂತದಲ್ಲಿ 1.30 ಲಕ್ಷ ಜನರಿಗೆ ಆಹಾರ ಸಾಮಗ್ರಿ ಪೂರೈಸಿದೆ.
ಅಂದೇ ದುಡಿದು ತಿನ್ನುವ ಸ್ಥಿತಿಯಲ್ಲಿರುವ ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆಬೆಂಗಳೂರು ನಗರದಲ್ಲೇ ದಿನಸಿ ಪದಾರ್ಥಗಳಿರುವ 27,415 ಕಿಟ್ಗಳನ್ನು ಸಂಘ ವಿತರಣೆ ಮಾಡಿದೆ.
‘ಮಾರ್ಚ್ 25ರಿಂದ ಕಿಟ್ ವಿತರಣೆ ಆರಂಭಿಸಲಾಗಿದೆ. 5 ಕೆ.ಜಿ ಅಕ್ಕಿ, 1 ಕೆ.ಜಿ ಬೇಳೆ, 500 ಗ್ರಾಂ ಎಣ್ಣೆ, 500 ಗ್ರಾಂ ಉಪ್ಪು, ಈರುಳ್ಳಿ ಮತ್ತು ಆಲೂಗಡ್ಡೆ ಕ್ರಮವಾಗಿ ತಲಾ 1 ಕೆ.ಜಿ ಇರುವ 36,608 ಕಿಟ್ಗಳನ್ನುತಲುಪಿಸಲಾಗಿದೆ’ ಎಂದು ಆರ್ಎಸ್ಎಸ್ ತಿಳಿಸಿದೆ.
42 ಸೇವಾ ಸ್ಥಾನಗಳಲ್ಲಿ 1989 ಕಾರ್ಯಕರ್ತರು, 57 ಮಾತೆಯರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಗತ್ಯ ಇದ್ದವರಿಗೆ ವೈದ್ಯಕೀಯ ಸೇವೆ, ವಸತಿ,ಪ್ರಯಾಣ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದೆ.
ಕಿಟ್ ವಿತರಿಸುವ ಸ್ವಯಂ ಸೇವಕರಿಗೆ ಮಾಸ್ಕ್, ಹ್ಯಾಂಡ್ ಗ್ಲೌಸ್ಗಳನ್ನು ವಿತರಿಸಲಾಗಿದೆ ಎಂದು ಸಂಘ ತಿಳಿಸಿದೆ.