ಹುಬ್ಬಳ್ಳಿ: ನವಲಗುಂದದಲ್ಲಿ ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿಯಲಾರಂಭಿಸಿದೆ.
ಸಂಜೆ 4.30ರಿಂದ ಮಳೆ ಆರಂಭವಾಗಿದ್ದು, ಗುಡುಗು ಸಿಡಿಲಿನ ಆರ್ಭಟ ಜೋರಾಗಿದೆ. ಮಳೆ ನೀರಿನಿಂದ ಚರಂಡಿಗಳು ತುಂಬಿ ಹರಿಯುತ್ತಿವೆ. ಜತೆಗೆ ಜೋರಾಗಿ ಗಾಳಿ ಬೀಸುತ್ತಿದೆ. ಇದರಿಂದ ಸಂಜೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ತುಪ್ಪದ ಕುರಹಟ್ಟಿ ಗ್ರಾಮದಲ್ಲಿ ಜೋರಾಗಿ ಬಿಸಿದ ಗಾಳಿಯಿಂದಾಗಿ ಮನೆ ಮೆಲಿನ ತಗಡುಗಳು ಹಾರಿ ಹೊಗಿವೆ. ವಿದ್ಯುತ್ ತಂತಿ ಹರಿದು ಬಿದ್ದಿದೆ. ಮರಗಳು ನೆಲಕ್ಕುರಿಳಿವೆ.
ನವಲಗುಂದ ತಾಲ್ಲೂಕಿನಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಾತ್ರಿ 8ಗಂಟೆವರೆಗೆ ಮಳೆ ಸುರಿದಿದ್ದು, ಬೆಣ್ಣೆ ಹಳ್ಳ ಮೈದುಂಬಿ ಹರಿಯುತ್ತಿದೆ.
ಹೊಸಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ಸಂಜೆ ಮಳೆ ಸುರಿಯಿತು.
ತಂಪೆರೆದ ಬಿರುಗಾಳಿ ಮಳೆ
ಹೊಸಪೇಟೆ: ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ಸಂಜೆ ಸುರಿದ ಬಿರುಗಾಳಿ ಮಳೆಗೆ ವಾತಾವರಣ ಸಂಪೂರ್ಣ ತಂಪಾಗಿತ್ತು.
ಕಳೆದ ಎರಡ್ಮೂರು ದಿನಗಳಿಂದ ಬಿಸಿಲು, ಉಬ್ಬಣಿಕೆ ಇತ್ತು. ಶಕೆಯಿಂದ ಜನ ಕಂಗಾಲಾಗಿದ್ದರು. ಮಂಗಳವಾರ ಸುರಿದ ಮಳೆ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
ಸಂಜೆ ಏಳು ಗಂಟೆ ಸುಮಾರಿಗೆ ಆರಂಭವಾದ ಮಳೆ ಎಂಟು ಗಂಟೆಯ ವರೆಗೆ ಎಡೆಬಿಡದೆ ಸುರಿಯಿತು. ಮಳೆಯೊಂದಿಗೆ ಭಾರಿ ಬಿರುಗಾಳಿ ಇದ್ದದ್ದರಿಂದ ವಾಹನ ಸವಾರರು ರಸ್ತೆಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ, ಕಟ್ಟಡಗಳ ಅಡಿ ಆಶ್ರಯ ಪಡೆದಿದ್ದರು. ಇದೇ ವೇಳೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ ಕಾರಣ ಇಡೀ ನಗರ ರಾತ್ರಿ ಒಂಬತ್ತು ಗಂಟೆಯ ವರೆಗೆ ಅಂಧಕಾರದಲ್ಲಿ ಮುಳುಗಿತ್ತು.
ತಾಲ್ಲೂಕಿನ ಹಂಪಿ, ಕಮಲಾಪುರ, ಪ್ರಕಾಶ್ ನಗರ, ಕಡ್ಡಿರಾಂಪುರ, ಮಲಪನಗುಡಿ, ಚಿನ್ನಾಪುರ, ನಲ್ಲಾಪುರ, ಬೈಲುವದ್ದಿಗೇರಿ, ರಾಮಸಾಗರ, ವೆಂಕಟಾಪುರ, ಹೊಸೂರು, ಕಲ್ಲಹಳ್ಳಿ ಸೇರಿದಂತೆ ಇತರೆ ಕಡೆ ವರ್ಷಧಾರೆಯಾಗಿದೆ.