ಬಳ್ಳಾರಿ: ಜಿಲ್ಲೆಯ ಜನರಿಗೆ ಸಂತಸದ ಸುದ್ದಿ ಇಲ್ಲಿದೆ. ಫೆಬ್ರುವರಿಯಿಂದ ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್ಗಳು ಆರಂಭವಾಗಲಿವೆ.
ರಿಯಾಯಿತಿ ದರದಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆಯನ್ನು ಫೆಬ್ರುವರಿ ಮೊದಲ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸುವುದು ಬಹುತೇಕ ಖಚಿತವಾಗಿದೆ.
ಒಂದು ಲಕ್ಷ ಜನಸಂಖ್ಯೆಗೆ ಒಂದರಂತೆ ಜಿಲ್ಲೆಗೆ 13 ಕ್ಯಾಂಟೀನ್ಗಳು ಮಂಜೂರಾಗಿದ್ದು, ಮೊದಲ ಹಂತದಲ್ಲಿ ಜಿಲ್ಲಾ ಕೇಂದ್ರದಲ್ಲಿ ಆರಂಭವಾಗಲಿವೆ. ಎರಡನೇ ಹಂತದಲ್ಲಿ ಹೊಸಪೇಟೆಯಲ್ಲಿ ಆರಂಭವಾಗಲಿವೆ.
ಒಂದು ವರ್ಷದ ಅವಧಿಗೆ ಆಹಾರ ಪದಾರ್ಥ ಪೂರೈಸುವ ಕುರಿತ ಟೆಂಡರ್ ಅಂತಿಮಗೊಂಡಿದ್ದು, ಸರ್ಕಾರದ ಅನುಮೋದನೆ ದೊರಕಬೇಕಾಗಿದೆ.
‘ಬಡಜನರಿಗೆ ಅನುಕೂಲವಾಗಬೇಕು ಎಂಬುದು ಕ್ಯಾಂಟೀನ್ ಉದ್ದೇಶ. ಅದಕ್ಕೆ ಅನುಗುಣವಾಗಿಯೇ ಸ್ಥಳಗಳನ್ನು ಗುರುತಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಬೆಳಗಲ್ ಕ್ರಾಸ್ ಪ್ರದೇಶ ಹೊರತುಪಡಿಸಿ ಉಳಿದೆಲ್ಲ ಸ್ಥಳದಲ್ಲೂ ದುಡಿಯುವ ವರ್ಗದ ಜನ ಹೆಚ್ಚು ಇರುತ್ತಾರೆ’ ಎಂದು ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್ ಮನೋಹರ್ ಅಭಿಪ್ರಾಯಪಟ್ಟರು.
‘ಪ್ರಜಾವಾಣಿ’ಯೊಂದಿಗೆ ಗುರುವಾರ ಮಾತನಾಡಿದ ಅವರು, ‘ಮೊದಲು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕ್ಯಾಂಟಿನ್ ಆರಂಭಿಸಲು ಸರ್ಕಾರ ಸೂಚಿಸಿತ್ತು. ಅದರಂತೆಯೇ ಸಿದ್ಧತೆ ನಡೆದಿದೆ. ರಾಜ್ಯದ ಇತರೆ ಪಾಲಿಕೆಗಳಿಗಿಂತ ಹೆಚ್ಚು ವೇಗದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದರು.
ಬೆಳಗಲ್ ಕ್ರಾಸ್ ವಿಳಂಬ: ‘ಬೆಳಗಲ್ ಕ್ರಾಸ್ನಲ್ಲಿ ಹೆಚ್ಚು ಕೂಲಿಕಾರರು ನೆರೆಯುವುದರಿಂದ ಅಲ್ಲಿ ಕ್ಯಾಂಟೀನ್ ಆರಂಭಿಸಬೇಕು ಎಂದು ಎಸ್.ಪಿ ಆರ್.ಚೇತನ್ ಸಲಹೆ ನೀಡಿದ್ದರು. ಅದರಂತೆ ಅಲ್ಲಿನ ಟಿ.ಬಿ.ಸ್ಯಾನಿಟೋರಿಯಂ ಬಳಿ ಕ್ಯಾಂಟೀನ್ ಆರಂಭಿಸಲು ಚಿಂತನೆ ನಡೆದಿತ್ತು. ಅಲ್ಲಿ ದೊಡ್ಡ ಪೈಪ್ಲೈನ್ ಹಾದುಹೋಗಿರುವುದರಿಂದ ಸ್ಥಳವನ್ನು ಅಂತಿಮಗೊಳಿಸಿಲ್ಲ’ ಎಂದು ಮಾಹಿತಿ ನೀಡಿದರು.
‘ಜಿಲ್ಲಾ ಕೇಂದ್ರ ಮತ್ತು ಹೊಸಪೇಟೆಯಲ್ಲಿ ಸ್ಥಾಪನೆಯಾದ ಬಳಿಕ ತಾಲ್ಲೂಕು ಕೇಂದ್ರಗಳಲ್ಲಿ ಕ್ಯಾಂಟೀನ್ಗಳನ್ನು ಸ್ಥಾಪಿಸಲಾಗುವುದು’ ಎಂದರು.
**
ಇಂದಿರಾ ಕ್ಯಾಂಟೀನ್ಗಳ ಸ್ಥಾಪನೆ ಕಾರ್ಯ ನಗರದಲ್ಲಿ ಆರಂಭವಾಗಿದ್ದು, ಜನವರಿ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ
–ಡಾ,ರಾಮಪ್ರಸಾದ್ ಮನೋಹರ್, ಜಿಲ್ಲಾಧಿಕಾರಿ.
**