ಹುಮನಾಬಾದ್: ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹೈದರಾಬಾದ್ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ 371(ಜೆ) ಅಡಿ ಸರ್ಕಾರ ಈಗಾಗಲೇ ಲ್ಯಾಪ್ಟಾಪ್ ವಿತರಿಸಿದೆ. ಅದರಂತೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ಲ್ಯಾಪ್ಟಾಪ್ ಕೊಡಿಸಲು ಪ್ರಯತ್ನಿಸಲಾಗುವುದು’ ಕೆಆರ್ಐಡಿಎಲ್ ಅಧ್ಯಕ್ಷ ರಾಜಶೇಖರ ಬಿ.ಪಾಟೀಲ ಅವರು ಭರವಸೆ ನೀಡಿದರು.
ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಬುಧವಾರ ಪ.ಜಾ, ಪ.ಪಂ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯ ಬಳಕೆ ಮಾಡಿಕೊಂಡು ಉತ್ತಮ ಫಲಿತಾಂಶ ಪಡೆದು ಕಾಲೇಜಿಗೆ ಕೀರ್ತಿ ತರಬೇಕು. ಶಿಕ್ಷಣದ ಜೊತೆ ಶಿಸ್ತು ಮತ್ತು ಸಂಸ್ಕಾರವೂ ಅಷ್ಟೇ ಮುಖ್ಯ. ಎನ್ನೆಸ್ಸೆಸ್ಸ್ ಶಿಬಿರಗಳ ನೆಪದಲ್ಲಿ ಹಳ್ಳಿಗಳಲ್ಲಿ ಹೋಗಿ ವಿಶೇಷ ಶಿಬಿರ ನಡೆಸುವುದಕ್ಕಿಂತ ಕಾಲೇಜು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ವೀರಣ್ಣ ತುಪ್ಪದ್ ಅಧ್ಯಕ್ಷತೆ ವಹಿಸಿ, ‘ಸರ್ಕಾರದ ಅನುದಾನದಲ್ಲಿ ಕೊಳ್ಳಲಾದ ಅಭಿವೃದ್ದಿ ಜೊತೆಗೆ ವಿದ್ಯಾರ್ಥಿಗಳ ಸಾಧನೆ ವಿವರಿಸಿ, ಎಲ್ಲ ಕೆಲಸ ಪಾರದರ್ಶಕವಾಗಿ ಕೈಗೊಳ್ಳಲಾಗುತ್ತಿದೆ’ ಎಂದರು.
ತಾ.ಪಂ ಅಧ್ಯಕ್ಷ ರಮೇಶ ಡಾಕುಳಗಿ, ಜಿ.ಪಂ ಮಾಜಿ ಅಧ್ಯಕ್ಷ ರಾಜಶೇಖರ ಪಾಟೀಲ, ಕಾಲೇಜು ಸುಧಾರಣಾ ಸಮಿತಿ ಸದಸ್ಯರುಗಳಾದ ವಿನಾಯಕ ಯಾದವ, ಸಂಜಯಸಿಂಗ್ ಠಾಕೂರ್, ರಹಿಂಖಾನ್, ಪ್ರಭು ತಾಳಮಡಗಿ, ಮಲ್ಲಪ್ಪ ತುಪ್ಪದ್, ರಾಜು ಬತಲಿ ಇದ್ದರು.