ಬಾಲಸೋರ್ (ಒಡಿಶಾ): ಅಣ್ವಸ್ತ್ರ ಒಯ್ಯಬಲ್ಲ, ಭಾರತದ ಅತ್ಯಂತ ಶಕ್ತಿಶಾಲಿ ಖಂಡಾಂತರ ಕ್ಷಿಪಣಿ ಅಗ್ನಿ–5 ಅನ್ನು ಒಡಿಶಾ ಕರಾವಳಿಯಲ್ಲಿ ಗುರುವಾರ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು.
ಅಬ್ದುಲ್ ಕಲಾಂ ದ್ವೀಪದಲ್ಲಿರುವ ಉಡಾವಣಾ ನೆಲೆಯ ನಂ. 4 ಉಡಾವಣಾ ಪ್ಯಾಡ್ನಿಂದ ಬೆಳಿಗ್ಗೆ 9.54ಕ್ಕೆ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು. 5,000 ಕಿಲೋ ಮೀಟರ್ಗಿಂತಲೂ ಹೆಚ್ಚು ದೂರದ ಗುರಿಯನ್ನು ತಲುಪಬಲ್ಲ ಸಾಮರ್ಥ್ಯವಿರುವ ಈ ಕ್ಷಿಪಣಿಯು 19 ನಿಮಿಷಗಳಲ್ಲಿ 4,900 ಕಿಲೋ ಮೀಟರ್ ದೂರ ಕ್ರಮಿಸಿದೆ.
‘ನಾಲ್ಕು ಯಶಸ್ವಿ ಪರೀಕ್ಷೆಯ ಬಳಿಕ ಅಗ್ನಿ–5 ಅನ್ನು ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ. ಇದನ್ನು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ನಿರ್ಮಿಸಲಾಗಿದ್ದು, ಅಗ್ನಿ ಸರಣಿಯ ಅತ್ಯಂತ ಪ್ರಬಲ ಕ್ಷಿಪಣಿಯಾಗಿದೆ.
ಈ ಕ್ಷಿಪಣಿಯ ದಾಳಿ ವ್ಯಾಪ್ತಿ 5,000 ಕಿ.ಮೀ ಗಿಂತಲೂ ಹೆಚ್ಚಿರುವುದರಿಂದ ಇದರ ಮೂಲಕ ಚೀನಾದ ಯಾವುದೇ ಸ್ಥಳ ಸೆರಿದಂತೆ ಏಷ್ಯಾದ ಎಲ್ಲ ರಾಷ್ಟ್ರಗಳ ಮೇಲೆ ದಾಳಿ ನಡೆಸಬಹುದು. ಜತೆಗೆ ಯೂರೋಪ್ ಮತ್ತು ಆಫ್ರಿಕಾ ಖಂಡಗಳ ಕೆಲವು ರಾಷ್ಟ್ರಗಳ ಮೇಲೆ ದಾಳಿ ನಡೆಸಬಹುದು. ಹೀಗಾಗಿ ದೂರದ ರಾಷ್ಟ್ರಗಳ ಮೇಲೂ ದಾಳಿ ನಡೆಸುವ ಸಾಮರ್ಥ್ಯ ಭಾರತೀಯ ಸೇನೆ ಹೊಂದಲಿದೆ ಎಂದು ಕೆಲವು ಮೂಲಗಳು ವರದಿ ಮಾಡಿವೆ.