ನವದೆಹಲಿ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಿತ್ರದ ಬಿಡುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿ ಚತ್ತೀಸ್ಗಡದ ರಜಪೂತ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ.
’ಇದು ನಮ್ಮ ಕೊನೆಯ ಎಚ್ಚರಿಕೆ. ರಾಣಿ ಪದ್ಮಾವತಿಯ ಘನತೆಯ ಜತೆ ಆಟವಾಡಲು ಯಾರಿಗೂ ಅವಕಾಶ ಕೊಡುವುದಿಲ್ಲ. ನಮ್ಮ ಎಚ್ಚರಿಕೆಯನ್ನು ಮೀರಿಯೂ ಚಿತ್ರ ಪ್ರದರ್ಶನ ಕಂಡಲ್ಲಿ, ಚಿತ್ರಮಂದಿರಗಳಿಗೆ ಬೆಂಕಿ ಹಚ್ಚಲಿದ್ದೇವೆ’ ಎಂದು ರಜಪೂತ ಸಮುದಾಯದವರು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ ಈ ಸಂಬಂಧ ರಜಪೂತ ಸಮುದಾಯದ ಕೆಲವು ಸದಸ್ಯರು ಚಿತ್ರದ ಮೇಲೆ ನಿಷೇಧ ಹೇರಬೇಕೆಂದು ಚತ್ತೀಸ್ಗಡದ ಗೃಹ ಸಚಿವ ರಾಮ್ಸೇವಕ್ ಪಾಯ್ಕರ್ ಅವರಿಗೆ ಲಿಖಿತ ಪತ್ರ ಸಲ್ಲಿಸಿದ್ದಾರೆ.
ವಿವಿಧ ರಾಜ್ಯಗಳಲ್ಲಿ ‘ಪದ್ಮಾವತ್’ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಿರುವ ಕ್ರಮ ಪ್ರಶ್ನಿಸಿ ಸಿನಿಮಾ ನಿರ್ಮಾಪಕರು ಸಲ್ಲಿಸಿದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಬುಧವಾರ ಸಮ್ಮತಿಸಿದೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಾಜಸ್ಥಾನ, ಹರಿಯಾಣ, ಗುಜರಾತ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶದಲ್ಲಿ ‘ಪದ್ಮಾವತ್’ ಚಿತ್ರಕ್ಕೆ ನಿಷೇಧ ಹೇರಲಾಗಿದೆ. ಇದೇ 25ರಂದು ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.