ಬೆಂಗಳೂರು: ಕೆಂಗೇರಿ ರೈಲು ನಿಲ್ದಾಣ ಬಳಿ ರೈಲಿಗೆ ತಲೆಕೊಟ್ಟು ಲಿಂಗರಾಜು (27) ಹಾಗೂ ಪ್ರಿಯಾ (23) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬ್ಯಾಡರಹಳ್ಳಿ ನಿವಾಸಿಗಳಾದ ಇವರಿಬ್ಬರೂ, ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಗುರುವಾರ ನಸುಕಿನಲ್ಲಿ ಮನೆಯಿಂದ ಹೊರಬಂದಿರುವ ಇವರು, ಚಲಿಸುತ್ತಿದ್ದ ರೈಲಿನ ಮುಂದೆ ಬಿದ್ದಿದ್ದಾರೆ.
ಹಳಿ ಮೇಲೆ ಛಿದ್ರವಾಗಿ ಬಿದ್ದಿದ್ದ ದೇಹಗಳನ್ನು ಕಂಡ ಸ್ಥಳೀಯರು, ಠಾಣೆಗೆ ಮಾಹಿತಿ ನೀಡಿದರು. ಸ್ಥಳದಲ್ಲಿ ಸಿಕ್ಕ ಕೆಲ ಗುರುತಿನ ಚೀಟಿಗಳ ಸಹಾಯದಿಂದ ವಿಳಾಸ ತಿಳಿದುಕೊಂಡು ಕುಟುಂಬದವರಿಗೆ ವಿಷಯ ತಿಳಿಸಿದೆವು ಎಂದು ಪೊಲೀಸರು ಹೇಳಿದ್ದಾರೆ.
ಮದುವೆಗೆ ಒಪ್ಪಿದ್ದ ಪೋಷಕರು: ಮೃತ ಲಿಂಗರಾಜು ಬೀದಿಬದಿ ವ್ಯಾಪಾರಿ ಆಗಿದ್ದರು. ಪ್ರಿಯಾ, ಸಿದ್ಧ ಉಡುಪು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ಮನೆಗಳು ಒಂದೇ ಪ್ರದೇಶದಲ್ಲಿ ಇದ್ದುದರಿಂದ, ಅವರಿಬ್ಬರ ನಡುವೆ ಸ್ನೇಹವಾಗಿತ್ತು. ಕ್ರಮೇಣ ಆ ಸ್ನೇಹ ಪ್ರೀತಿಗೆ ತಿರುಗಿತ್ತು ಎಂದು ಪೊಲೀಸರು ಹೇಳಿದರು.
‘ಪ್ರೀತಿಯ ವಿಷಯ ಇತ್ತೀಚೆಗೆ ಕುಟುಂಬದವರಿಗೆ ಗೊತ್ತಾಗಿತ್ತು. ಮದುವೆಗೆ ಅವರ ಒಪ್ಪಿಗೆ ಕೂಡ ಇತ್ತು. ಅಷ್ಟಾದರೂ, ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.