ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ ಶಿವಕುಮಾರ್ ಶುಕ್ರವಾರ ಅನಿರೀಕ್ಷಿತ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಂಡ ಅವರು, ವೈದ್ಯರು ಹಾಗೂ ರೋಗಿಗಳ ಅಹವಾಲು ಆಲಿಸಿದರು.
‘ಗ್ಯಾಂಗ್ರಿನ್ ಸಮಸ್ಯೆಗೆ ಒಳಗಾಗಿದ್ದ ರೋಗಿಯೊಬ್ಬರು ತಮ್ಮ ಚಿಕಿತ್ಸೆಗೆ ಮೂರು ಲಕ್ಷ ಕೇಳುತ್ತಿದ್ದಾರೆ’ ಎಂದು ಆರೋಪ ಮಾಡಿದರು. ‘ದಿನಕ್ಕೆ ₹ 30ಕ್ಕೆ ಬದಲು ₹ 3 ಲಕ್ಷ ಕೇಳುತ್ತಿರುವುದು ಏಕೆ’ ಎಂದು ಸಚಿವರು ಆಶ್ಚರ್ಯ ವ್ಯಕ್ತಪಡಿಸಿದರು.
ಬೆಳಿಗ್ಗೆ 9.30ರ ವೇಳೆಗೆ ಕರ್ತವ್ಯಕ್ಕೆ ಬರಬೇಕಿದ್ದ ನೋಡಲ್ ಅಧಿಕಾರಿ ಹಸೀನಾ ಬಾನು ಅವರು ಸಚಿವರ ಭೇಟಿ ತಿಳಿದು 11 ಗಂಟೆಗೆ ಗಡಿಬಿಡಿಯಿಂದ ಬಂದರು.
‘ನಾನಿಲ್ಲಿಗೆ ತಪ್ಪುಗಳನ್ನು ಕಂಡುಹಿಡಿಯಲು ಬಂದಿಲ್ಲ. ಉತ್ತಮ ಉದ್ದೇಶದಿಂದ ಬಂದಿದ್ದೇನೆ. ರೋಗಿಗಳ ನೋಂದಣಿ ಪ್ರಕ್ರಿಯೆಯಲ್ಲಿ ಗೊಂದಲಗಳು ಇವೆ. ಅನೇಕ ಸಮಸ್ಯೆ ಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲಿದ್ದೇವೆ. ಕೇಂದ್ರೀಕೃತ ನೋಂದಣಿ ಹಾಗೂ ಬಿಲ್ಲಿಂಗ್ ವ್ಯವಸ್ಥೆ ಜಾರಿಗೆ ಆದೇಶಿಸಿದ್ದೇನೆ. 75 ದಿನಗಳಲ್ಲಿ ಜಾರಿಗೆ ಬರಲಿದೆ’ ಎಂದು ಡಿಕೆಶಿ ಹೇಳಿದರು.
‘ಆಸ್ಪತ್ರೆಯನ್ನು ಕೆಲವರು ಹೋಟೆಲ್ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ದೂರು ಕೇಳಿಬಂದಿದೆ. ರೋಗಿಗಳ ಸೇವೆಯ ಬದಲು, ಬೇರೆ ಉದ್ದೇಶಗಳಿಂದ ಇಲ್ಲಿಗೆ ಬರುವವರನ್ನು ಸಹಿಸುವುದಿಲ್ಲ.
ಇದಕ್ಕೆ ಕಡಿವಾಣ ಹಾಕಬೇಕು. ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಬಯೋಮೆಟ್ರಿಕ್ ಕಡ್ಡಾಯಗೊಳಿಸುತ್ತೇವೆ. ಅಗತ್ಯ ಇರುವ ಕಡೆ ಸಿ.ಸಿ ಟಿವಿ ಅಳವಡಿಸಲಿದ್ದೇವೆ’ ಡಿ.ಕೆ. ಶಿವಕುಮಾರ್ ಎಂದು ಹೇಳಿದರು.
ರೋಗಿಯನ್ನು ದಾಖಲಿಸಿಕೊಳ್ಳುವಲ್ಲಿ ಸಿಬ್ಬಂದಿಯಿಂದ ಗೊಂದಲ: ಆರೋಪ
ಕೆಂಗೇರಿ ಮುಖ್ಯರಸ್ತೆಯಲ್ಲಿ ಅಪಘಾತಕ್ಕೆ ಒಳಗಾಗಿದ್ದ ರೋಗಿ ನಿಶಾಂತ್ ಅವರನ್ನು ತುರ್ತು ಚಿಕಿತ್ಸೆ ವಿಭಾಗದಲ್ಲಿ ದಾಖಲು ಮಾಡಿಕೊಳ್ಳಲು ತಡ ಮಾಡಲಾಯಿತು ಎಂದು ಅವರ ಪೋಷಕರು ಆರೋಪ ಮಾಡಿದರು.
ಸಚಿವರು ಅಲ್ಲಿಂದ ತೆರಳಿದ ಅರ್ಧ ಗಂಟೆಯಲ್ಲಿಯೇ ಆಸ್ಪತ್ರೆಯ ಬಳಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
‘ಒಟ್ಟಿಗೆ ಎಂಟು ಆ್ಯಂಬುಲೆನ್ಸ್ಗಳು ಆವರಣದಲ್ಲಿ ನಿಂತಿದ್ದಾಗ ಎಲ್ಲರನ್ನೂ ಒಟ್ಟಿಗೆ ದಾಖಲು ಮಾಡಿಕೊಳ್ಳುವುದು ಕಷ್ಟ. ಇಂತಹ ಸಂದರ್ಭದಲ್ಲಿ ಕೆಲವು ನಿಮಿಷ ಕಾಯಬೇಕಾಗಿರಬಹುದು. ಆದರೆ, ರೋಗಿಗೆ ಸರಿಯಾದ ಚಿಕಿತ್ಸೆ ನೀಡಲಾಗಿದೆ. ಈಗ ಅವರು ತುರ್ತು ಚಿಕಿತ್ಸೆ ವಿಭಾಗದಲ್ಲಿ ಇದ್ದಾರೆ. ಯಾವುದೇ ತೊಂದರೆ ಆಗಿಲ್ಲ’ ಎಂದು ಆಸ್ಪತ್ರೆ ವಿಶೇಷ ಅಧಿಕಾರಿ ಬಾಲಾಜಿ ಪೈ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.