ಬೆಂಗಳೂರು: ‘ಸಂಗೀತ ಕಲಾ ರತ್ನ’ ವಿದುಷಿ ಎಂ.ಎಸ್.ಶೀಲಾ ಅವರಿಗೆ 2018ನೇ ಸಾಲಿನ ನಿರ್ಮಾಣ್-ಪುರಂದರ ಸಂಗೀತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬನ್ನೇರುಘಟ್ಟ ಸಮೀಪದ ನಿಸರ್ಗ ಬಡಾವಣೆಯಲ್ಲಿನ ಪುರಂದರ ಮಂಟಪದಲ್ಲಿ ಯದುಗಿರಿ ಯತಿರಾಜ ಮಠದ ಯತಿರಾಜ ನಾರಾಯಣ ರಾಮಾನುಜ ಸ್ವಾಮೀಜಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ಪುರಂದರ ದಾಸರ ಚಿತ್ರ ಇರುವ ಚಿನ್ನದ ಸ್ಮರಣಿಕೆ ಹಾಗೂ ₹1 ಲಕ್ಷ ನಗದು ಪುರಸ್ಕಾರವನ್ನು ಒಳಗೊಂಡಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶೀಲಾ, ‘ಪುರಂದರ ದಾಸರ ಹೆಸರಿನ ಈ ಪ್ರಶಸ್ತಿ ನನ್ನ ಜೀವನದ ಸವಿನೆನಪಾಗಿ ಉಳಿಯುತ್ತದೆ. ದಾಸರ ಸಾಹಿತ್ಯದಲ್ಲಿ ಭಕ್ತಿ, ತಾಯಿಯ ವಾತ್ಸಲ್ಯ ಅಷ್ಟೇ ಅಲ್ಲದೆ, ಸಮಾಜಕ್ಕೆ ಉಪಯುಕ್ತವಾಗುವ ಸಂಗತಿಗಳಿವೆ’ ಎಂದು ಅಭಿಪ್ರಾಯಪಟ್ಟರು.