ಬೆಂಗಳೂರು: ದೊಡ್ಡಬಿದರಕಲ್ಲು ತ್ಯಾಜ್ಯ ಸಂಸ್ಕರಣ ಘಟಕದ ಕಸದ ವಾಸನೆ ಬಾರದಂತೆ ತಡೆಯಲು 200 ಮೀಟರ್ ಪ್ರದೇಶವನ್ನು ಮೀಸಲು ಪ್ರದೇಶವ
ನ್ನಾಗಿಸಲು ಚಿಂತನೆ ನಡೆಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಜಿ. ಪರಮೇಶ್ವರ ತಿಳಿಸಿದರು.
ದೊಡ್ಡ ಬಿದರಕಲ್ಲು ಹಾಗೂ ಹೆಮ್ಮಿಗೆಪುರ ತ್ಯಾಜ್ಯ ಸಂಸ್ಕರಣ ಘಟಕಗಳಿಗೆ ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
200 ಮೀಟರ್ ಅಂತರದಲ್ಲಿ ಬಫರ್ ಜೋನ್ ತೆರೆಯುವುದರಿಂದ ಕಸದ ವಾಸನೆ ಈ ವ್ಯಾಪ್ತಿಯಲ್ಲಿ ಮಾತ್ರ ಇರಲಿದ್ದು, ಸುತ್ತಮುತ್ತಲು ಇರುವ ಜನರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದರು.
‘ಎರಡೂವರೆ ವರ್ಷದ ಹಿಂದೆ ಈ ಘಟಕ ವೈಜ್ಞಾನಿಕವಾಗಿ ಸ್ಥಾಪಿಸಲಾಗಿತ್ತು. ದಿನಕ್ಕೆ 130 ಟನ್ ಕಸ ಸಂಸ್ಕರಣೆ ಮಾಡಲಾಗುತ್ತದೆ. ಸಂಸ್ಕರಣೆಗೊಳ್ಳುವ ಕಸದಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ’ ಎಂದರು.
ನಗರದಲ್ಲಿ ನಾಲ್ಕೂವರೆ ಸಾವಿರ ಟನ್ ಕಸ ಉತ್ಪಾದನೆಯಾಗುತ್ತಿದ್ದು, ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಈಗಾಗಲೇ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಜನಸಾಮಾನ್ಯರು ಕೂಡ ಕಸವನ್ನು ಮನೆಯಲ್ಲೇ ವಿಂಗಡಣೆ ಮಾಡಿದರೆ ವಿಲೇವಾರಿ ಕೂಡ ಸುಲಭವಾಗುತ್ತದೆ. ಒಣ-ಹಸಿ ಕಸ ಬೇರ್ಪಡಿಸದೇ ಇರುವವರಿಗೆ ದಂಡ ಹಾಕುವುದರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಹೀಗಾಗಿ ಎಲ್ಲ ಜನರು ಕಸವನ್ನು ಮನೆಯಲ್ಲೇ ಬೇರ್ಪಡಿಸಬೇಕು ಎಂದು ಮನವಿ ಮಾಡಿದರು.