ಬೆಂಗಳೂರು: ಹನುಮಂತನಗರ ಠಾಣೆ ವ್ಯಾಪ್ತಿಯ ಕೆಂಪೇಗೌಡ ಲೇಔಟ್ನಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಪಾಯ ತೆಗೆಯುತ್ತಿದ್ದ ವೇಳೆ ಮಣ್ಣು ಕುಸಿದು ಅದರಡಿ ಕಾರ್ಮಿಕರೊಬ್ಬರು ಸಿಲುಕಿಕೊಂಡಿದ್ದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಹೊಸದಾಗಿ ಕಟ್ಟಡ ನಿರ್ಮಿಸಲು ರಸ್ತೆ ಬದಿ ಮಣ್ಣು ತೆಗೆಯುತ್ತಿದ್ದರು. ಇದೇ ವೇಳೆಯೇ ಮಣ್ಣು ಕುಸಿದಿತ್ತು. ಅದರಡಿ ಸಿಲುಕಿದ್ದ ಕಾರ್ಮಿಕರೊಬ್ಬರನ್ನು ಹನುಮಂತನಗರ ಠಾಣೆ ಪೊಲೀಸರು, ಸ್ಥಳೀಯರ ನೆರವಿನಿಂದ ಹೊರಗೆ ತೆಗೆದು ರಕ್ಷಿಸಿದ್ದಾರೆ.
‘ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲಸದ ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಇರಲಿಲ್ಲ. ಜಾಗದ ಮಾಲೀಕ ಹಾಗೂ ಕಟ್ಟಡ ನಿರ್ಮಾಣ ಗುತ್ತಿಗೆ ಪಡೆದವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.