ಬೆಂಗಳೂರು: ‘ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಬೇಕು’ ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು ಕುಮಾರಕೃಪಾ ರಸ್ತೆಯಲ್ಲಿರುವ ಮುಖ್ಯಮಂತ್ರಿ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಶಿವಾನಂದ ವೃತ್ತದಿಂದ ಮೆರವಣಿಗೆ ಮೂಲಕ ಸಾಗಿದ ಕಾರ್ಯಕರ್ತರು ಈಶ್ವರಪ್ಪ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ಯಮಕಿಂಕರ ಈಶ್ವರಪ್ಪನಿಗೆ ಧಿಕ್ಕಾರ’, ‘ಕೊಲೆಗಡುಕ ಈಶ್ವರಪ್ಪನಿಗೆ ಧಿಕ್ಕಾರ’, ‘ಭ್ರಷ್ಟಾಚಾರಿ ಈಶ್ವರಪ್ಪನಿಗೆ ಧಿಕ್ಕಾರ’, ‘ಈಶ್ವರಪ್ಪನನ್ನು ವಜಾಗೊಳಿಸಿ’ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಮುಖ್ಯಮಂತ್ರಿ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ಕಾರ್ಯಕರ್ತರನ್ನು ಮಾರ್ಗಮಧ್ಯದಲ್ಲೇ ಬಂಧಿಸಿದ ಪೊಲೀಸರು ಹೈಗ್ರೌಂಡ್ಸ್ ಠಾಣೆಗೆ ಕರೆದೊಯ್ದರು.
ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ, ‘ಸಂತೋಷ್ ಪಾಟೀಲ ಅವರು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಧೈರ್ಯ ತೋರಿದ್ದರು. ಅವರ ಸಾವಿಗೆ ಈಶ್ವರಪ್ಪನವರೇ ಹೊಣೆ. ಸಚಿವ ಸಂಪುಟದಲ್ಲಿ ಪ್ರಭಾವಿಯಾಗಿರುವ ಅವರು ಸಾಕ್ಷ್ಯಾಧಾರಗಳನ್ನುನಾಶಪಡಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಕೂಡಲೇ ಬಂಧಿಸಬೇಕು’ ಎಂದು ಆಗ್ರಹಿಸಿದರು.
‘ತನ್ನ ಸಾವಿಗೆ ಈಶ್ವರಪ್ಪನವರೇ ಹೊಣೆ ಎಂದು ಸಂತೋಷ್ ಪಾಟೀಲ ಅವರು ಮರಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹೀಗಿದ್ದರೂ ಅವರನ್ನು ಬಂಧಿಸಲು ಏಕೆ ವಿಳಂಬ ಮಾಡಲಾಗುತ್ತಿದೆ. ಕಾನೂನು ಎಲ್ಲರಿಗೂ ಒಂದೇ ಅಲ್ಲವೇ. ಅವರನ್ನು ಸಚಿವ ಸಂಪುಟದಿಂದ ಕೈಬಿಡದಿದ್ದರೆ ಪ್ರಕರಣದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ’ ಎಂದು ಮೋಹನ್ ದಾಸರಿ ದೂರಿದರು.
‘ಸಂತೋಷ್ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಈಶ್ವರಪ್ಪನವರನ್ನು ಬಂಧಿಸುವ ಬದಲು ಪೊಲೀಸರು ನಮ್ಮನ್ನು ವಶಕ್ಕೆ ಪಡೆದಿದ್ದಾರೆ. ಅವರ ನಡೆ ಖಂಡನೀಯ’ ಎಂದು ಟೀಕಿಸಿದರು.
ಮುಖಂಡರಾದ ಜಗದೀಶ್ ವಿ. ಸದಂ, ಚನ್ನಪ್ಪಗೌಡ ನೆಲ್ಲೂರು, ಕುಶಲಸ್ವಾಮಿ, ಉಷಾ ಮೋಹನ್, ಪ್ರಕಾಶ್ ನೆಡುಂಗಡಿ, ಸೀತಾರಾಮ್, ನಂಜಪ್ಪ ಕಾಳೇಗೌಡ, ಗೋಪಿನಾಥ್, ಕುದ್ರತ್, ಜಗದೀಶ್ ಬಾಬು, ಅಬ್ಬಾಸ್ ಇದ್ದರು.