ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಶೈಕ್ಷಣಿಕ ಗೊಂದಲಗಳ ನಿವಾರಣೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದಆಮ್ ಆದ್ಮಿ ಪಕ್ಷವು (ಎಎಪಿ) ‘ಶುಲ್ಕ ಇಳಿಸಿ; ಮಕ್ಕಳ ಭವಿಷ್ಯ ಉಳಿಸಿ’ ಅಭಿಯಾನ ಹಮ್ಮಿಕೊಂಡಿದೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ‘ಖಾಸಗಿ ಶಾಲೆಗಳ ಶುಲ್ಕವನ್ನು ಶೇ 30ರಷ್ಟು ಇಳಿಸಿ ಪೋಷಕರಿಗೆ ಸಹಾಯ ಮಾಡಬೇಕು. ಖಾಸಗಿ ಶಾಲೆಗಳ ಶಿಕ್ಷಕರಿಗೆ ಸಂಬಳ ಕೊಟ್ಟು ಶಾಲೆಗಳು ಪುನರಾರಂಭವಾಗಲು ಅನುವು ಮಾಡಿಕೊಡಬೇಕು. ಶುಲ್ಕ ನಿಯಂತ್ರಣ ಪ್ರಾಧಿಕಾರ ರಚಿಸಬೇಕು’ ಎಂದು ಒತ್ತಾಯಿಸಿದರು.
‘ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದ್ದು, ಪೋಷಕರು ಖಾಸಗಿ ಶಾಲೆಗಳ ಕಡೆಗೆ ಮುಖಮಾಡಿದ್ದಾರೆ. ಅವರು ಕೇಳಿದಷ್ಟು ಶುಲ್ಕ ಕೊಡುವಂತಾಗಿದೆ. ಈ ಕುರಿತು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಈ ಅಭಿಯಾನ ಆಯೋಜಿಸಲಾಗಿದೆ’ ಎಂದರು.
‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ ಅವರು ಇದೇ 5ರಂದು ಬೆಳಿಗ್ಗೆ 9 ಗಂಟೆಗೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಸಂಪಂಗಿರಾಮನಗರ ವಾರ್ಡ್ನಲ್ಲಿ ನಿಗದಿಯಾಗಿರುವ ಕಾರ್ಯಕ್ರಮದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷೆ ಶಾಂತಲಾ ದಾಮ್ಲೆ ಅವರೂ ಪಾಲ್ಗೊಳ್ಳಲಿದ್ದಾರೆ. ಅಭಿಯಾನದ ಅಂಗವಾಗಿ ಪಕ್ಷದ ಕಾರ್ಯಕರ್ತರು ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಮನೆ ಮನೆಗೆ ತೆರಳಿ ಕನಿಷ್ಠ 5 ಲಕ್ಷ ಮಂದಿಯ ಸಹಿ ಸಂಗ್ರಹಿಸಲಿದ್ದಾರೆ. 15 ದಿನ ಈ ಅಭಿಯಾನ ನಡೆಯಲಿದೆ. ಇದರ ಭಾಗವಾಗಲು 7669100500ಗೆ ಮಿಸ್ ಕಾಲ್ ನೀಡಿ’ ಎಂದು ಮನವಿ ಮಾಡಿದರು.
ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ, ಪ್ರಕಾಶ್, ಉಷಾ ಮೋಹನ್, ವಿಜಯ್ ಶಾಸ್ತ್ರಿಮಠ್ ಇದ್ದರು.