ಬೆಂಗಳೂರು: ‘ನಗರಕ್ಕೆ ರಾಷ್ಟ್ರೀಯ ತನಿಖಾ ದಳದ ಅವಶ್ಯಕತೆ ಖಂಡಿತ ಇದೆ. ಆದರೆ, ಇದನ್ನೇ ನೆಪವಾಗಿಸಿ ಬೆಂಗಳೂರು ಭಯೋತ್ಪಾದಕರ ಅಡಗು ತಾಣವೆಂದು ಬಿಂಬಿಸುತ್ತಿರುವ ಸಂಸದ ತೇಜಸ್ವಿ ಸೂರ್ಯ ಅವರ ನಡೆ ತೀರಾ ಖಂಡನೀಯ’ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
‘ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಳ್ವಿಕೆ ಇರುವಾಗಲೂ ನೀವು ಅಸುರಕ್ಷಿತರೇ’ ಎಂದು ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಪ್ರಶ್ನಿಸಿದ್ದಾರೆ.
‘ಬೇಜವಾಬ್ದಾರಿ ಹೇಳಿಕೆಯಿಂದ ಸಂಸದರು ಪೊಲೀಸ್ ವ್ಯವಸ್ಥೆಯನ್ನು ಕಳಂಕಿತಗೊಳಿಸಿದ್ದಾರೆ. ಕನ್ನಡಿಗರು ಹಾಗೂ ರಾಜ್ಯದ ಪೊಲೀಸ್ ವ್ಯವಸ್ಥೆಯನ್ನು ಅವಮಾನಿಸಿರುವ ಅವರು ಕೂಡಲೇ ಕ್ಷಮೆ ಕೋರಬೇಕು’ ಎಂದು ಒತ್ತಾಯಿಸಿದ್ದಾರೆ.
‘ನಿಮ್ಮ ಹಾಗೂ ಬಿಜೆಪಿಯ ದ್ವೇಷಪೂರಿತ ರಾಜಕಾರಣದಿಂದ ಪ್ರಗತಿಪರ ಕರ್ನಾಟಕದ ಕುರಿತ ಸದಭಿಪ್ರಾಯಕ್ಕೆ ಧಕ್ಕೆ ತರಲು ಬಿಡುವುದಿಲ್ಲ’ ಎಂದು ಅವರು ಹೇಳಿದ್ದಾರೆ.