ಬೆಂಗಳೂರು: ಕೊರೊನಾ ಸೋಂಕಿನ ಭೀತಿಯಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಿದ್ಧತೆ ಆರಂಭಿಸಿರುವ ರಾಜ್ಯ ಸರ್ಕಾರದ ನಡೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬೆಂಬಲಿಸಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಂಗಳವಾರ ಭೇಟಿ ಮಾಡಿದ ಎಬಿವಿಪಿ ರಾಜ್ಯ ಸಮಿತಿ ಪ್ರಮುಖರು ಹಾಗೂ ಶಿಕ್ಷಣ ತಜ್ಞರು, ಕೊರೊನಾಗೆ ಹೆದರಿ ಪರೀಕ್ಷೆ ನಡೆಸದೆ ಎಲ್ಲರನ್ನೂ ಉತ್ತೀರ್ಣ ಮಾಡುವುದು ಸರಿಯಾದ ಕ್ರಮವಲ್ಲ, ಬದಲಿಗೆ ಮುಂಜಾಗ್ರತೆ ವಹಿಸಿ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳ ಸಾಮರ್ಥ್ಯ ಅಳೆಯುವ ಪ್ರಯತ್ನ ಅಗತ್ಯ ಎಂದು ಹೇಳಿದರು.
ಇದು ಒಂದು ವರ್ಷದ ಪ್ರಶ್ನೆಯಲ್ಲ; ಒಂದು ತಲೆಮಾರಿನ ಪ್ರಶ್ನೆಯಾಗುತ್ತದೆ. ಮುಂದೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪರೀಕ್ಷೆ ಇಲ್ಲದೆ ಪಾಸಾಗಿ ಬಂದವರು ಎಂಬ ಮೂದಲಿಕೆ ವಿದ್ಯಾರ್ಥಿಗಳ ಕೀಳರಿಮೆಗೆ ಕಾರಣವಾಗುತ್ತದೆ. ಹೀಗಾಗಿ ಸವಾಲುಗಳು ಏನೇ ಇದ್ದರೂ ಪರೀಕ್ಷೆ ನಡೆಸಲೇಬೇಕು ಎಂದು ಒತ್ತಾಯಿಸಿದರು.
ನಿಯೋಗದಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ, ಶಿಕ್ಷಣ ತಜ್ಞರಾದ ಡಾ.ಟಿ.ವಿ.ರಾಜು, ಡಾ.ಶೇಷಮೂರ್ತಿ, ಡಾ.ಶ್ರೀಕಂಠಯ್ಯ, ಮಾನಸಾ, ಕರಣಕುಮಾರ, ಎಬಿವಿಪಿ ಪ್ರಮುಖರಾದ ಸ್ವಾಮಿ ಮರಳಾಪುರ, ಹರ್ಷನಾರಾಯಣ, ಜಯಪ್ರಕಾಶ ತಂಟೆಪಾಡಿ, ಚಂದನಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.