ಬೆಂಗಳೂರು: ಜಮೀನಿನ ಖಾತೆ ವರ್ಗಾವಣೆಗೆ ₹7 ಲಕ್ಷ ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ವಿಶೇಷ ತಹಶೀಲ್ದಾರ್, ಶಿರಸ್ತೇದಾರ್ ಸೇರಿ ಮೂವರನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.
2 ಎಕರೆ ಜಮೀನು ಖರೀದಿಸಿದ್ದ ಬೇಗೂರು ಗ್ರಾಮದ ನಿವಾಸಿಯೊಬ್ಬರು ದಾಖಲೆಗಳು ಸರಿ ಇಲ್ಲದ ಕಾರಣ ಉಪವಿಭಾಗಾಧಿಕಾರಿ ನ್ಯಾಯಾಲಯದ ಮೊರೆ ಹೋಗಿದ್ದರು. ಅವರಿಗೇ ಭೂಮಿ ಸೇರಬೇಕು ಎಂಬ ಆದೇಶ ಬಂದಿದ್ದು, ಅಷ್ಟರಲ್ಲಿ ದೂರುದಾರರು ಮೃತಪಟ್ಟಿದ್ದರು.
‘ಅವರ ಮಕ್ಕಳ ಹೆಸರಿಗೆ ಖಾತೆ ವರ್ಗಾಯಿಸಿಕೊಡಲು ವಿಶೇಷ ತಹಶೀಲ್ದಾರ್ ಲಕ್ಷ್ಮಿ ಮತ್ತು ಶಿರಸ್ತೇದಾರ್ ಆರ್.ಆರ್. ಪ್ರಸನ್ನಕುಮಾರ್ ₹7 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಕ್ಷ್ಮೀ ಪರವಾಗಿ ಉಷಾ ಎಂಬುವರು ₹5 ಲಕ್ಷ ಮತ್ತು ಪ್ರಸನ್ನಕುಮಾರ್ ₹2 ಲಕ್ಷ ಪಡೆಯುವಾಗ ದಾಳಿ ನಡೆಸಿ ಮೂವರನ್ನು ಬಂಧಿಸಲಾಗಿದೆ’ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.