ಬೆಂಗಳೂರು: ಇಲ್ಲಿನ ಬಸವೇಶ್ವರನಗರ ಮತ್ತು ಮಿನರ್ವ ವೃತ್ತದಲ್ಲಿರುವ ತೂಕ ಹಾಗೂ ಮಾಪನ ಶಾಸ್ತ್ರ ಇಲಾಖೆ ಕಚೇರಿಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ದಾಳಿ ಮಾಡಿದ್ದು 22 ಮಂದಿ ಮಧ್ಯವರ್ತಿಗಳನ್ನು ಬಂಧಿಸಿ, ₹ 10 ಲಕ್ಷ ಲಂಚದ ಹಣ ವಶಪಡಿಸಿಕೊಂಡಿದ್ದಾರೆ.
ಅಂಗಡಿ, ಮುಂಗಟ್ಟು ಹಾಗೂ ಮಾಲ್ಗಳಿಗೆ ತೆರಳಿ ತೂಕ ಮತ್ತು ಅಳತೆ ಮಾಪನ ಪರಿಕರಗಳನ್ನು ತಪಾಸಣೆ ಮಾಡಿ ಪ್ರಮಾಣಪತ್ರ ನೀಡಬೇಕಿದ್ದ ಅಧಿಕಾರಿಗಳು ಕಚೇರಿಯಲ್ಲೇ ಕೂತು ಮಧ್ಯವರ್ತಿಗಳ ಮೂಲಕ ಈ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಐಜಿಪಿ ಚಂದ್ರಶೇಖರ್ ಮಾರ್ಗದರ್ಶನದಲ್ಲಿ, ಎಸ್.ಪಿ ಜಿನೇಂದ್ರ ಕಣಗಾವಿ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ವಿ.ವಿ ಪುರಂ ಡಯಗ್ನಲ್ ರಸ್ತೆಯಲ್ಲಿರುವ ಕಾನೂನು ಮಾಪನ ನಿರೀಕ್ಷಕರ ಕಚೇರಿ ಮೇಲೆ ದಾಳಿ ನಡೆಸಿ 11 ಜನ ದಲ್ಲಾಳಿಗಳ ಬಂಧಿಸಿ, ₹ 7.12 ಲಕ್ಷ, ಬಸವೇಶ್ವರನಗರದ ಕಚೇರಿಮೇಲೆ ದಾಳಿ ಮಾಡಿ 11 ಮಂದಿ ದಲ್ಲಾಳಿಗಳ ಬಂಧಿಸಿ ₹ 2.73 ಲಕ್ಷ ಜಪ್ತಿ ಮಾಡಲಾಗಿದೆ.
ಮಧ್ಯವರ್ತಿಗಳು, ಅಂಗಡಿ ಹಾಗೂ ಮುಂಗಟ್ಟುಗಳ ಮಾಲೀಕರಿಂದ ಲಂಚ ಪಡೆದು ಪ್ರಮಾಣಪತ್ರ ನೀಡುತ್ತಿದ್ದರು. ಬಂಧಿತರಿಂದ 200ಕ್ಕೂ ಹೆಚ್ಚು ಪ್ರಮಾಣಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಧಿಕಾರಿಗಳ ಸುಪರ್ದಿಯಲ್ಲಿ ಇರಬೇಕಿದ್ದ ದಾಖಲೆಗಳು ದಲ್ಲಾಳಿಗಳ ಬಳಿ ಸಿಕ್ಕಿವೆ. ಇವು ಹೇಗೆ ಕಚೇರಿಯಿಂದ ಹೋಯಿತು ಎಂಬ ಬಗ್ಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರ ವಿಚಾರಣೆ ಬಳಿಕ ಆರೋಪಿ ಅಧಿಕಾರಿಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಬರಲು ತಿಳಿಸಲಿದ್ದೇವೆ ಎಂದು ಎಸಿಬಿ ಅಧಿಕಾರಿ ತಿಳಿಸಿದರು.