ಬೆಂಗಳೂರು: ನಟಿ ಜಯಶ್ರೀ ರಾಮಯ್ಯ ಫೇಸ್ಬುಕ್ ಖಾತೆಯಲ್ಲಿ ಪ್ರಕಟಿಸಿದ್ದ ಪೋಸ್ಟ್ ಪೊಲೀಸರಿಗೂ ತಲೆನೋವು ಉಂಟು ಮಾಡಿತು.
‘ನಾನು ಹೋಗುತ್ತಿದ್ದೇನೆ. ಈ ಜಗತ್ತಿಗೆ ಹಾಗೂ ಒತ್ತಡಕ್ಕೆ ನನ್ನ ಕೊನೆ ನಮಸ್ಕಾರ’ ಎಂದು ಜಯಶ್ರೀ ಪೋಸ್ಟ್ ಮಾಡಿದ್ದರು. ನಂತರ, ಮೊಬೈಲ್ ಸಹ ಸ್ವಿಚ್ ಆಫ್ ಮಾಡಿದ್ದರು.
ಆತಂಕಗೊಂಡಿದ್ದ ಸ್ನೇಹಿತರು ನಟಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಪೋಸ್ಟ್ ಸಹ ವೈರಲ್ ಆಗಿತ್ತು. ‘ನಟಿ ಜಯಶ್ರೀ ಮನೆ ಬಳಿ ಯಾರಾದರೂ ಇದ್ದರೆ, ಅವರ ಮನೆಗೆ ಹೋಗಿ ರಕ್ಷಿಸಿ’ ಎಂದು ಹಲವರು ಕೋರಿದ್ದರು.
ಪುಟ್ಟೇನಹಳ್ಳಿ ಠಾಣೆ ಪೊಲೀಸರು ನಟಿಗಾಗಿ ಹುಡುಕಾಟ ಆರಂಭಿಸಿದ್ದರು. ಮಾನಸಿಕವಾಗಿ ನೊಂದಿರಬಹುದೆಂಬ ಕಾರಣಕ್ಕೆ ನಟಿಯನ್ನು ಸಂಬಂಧಿಕರು ಜಯನಗರದ ಆತ್ರೆಯೊಂದಕ್ಕೆ ದಾಖಲಿಸಿದ್ದರು.
ಸಂಜೆ ಮತ್ತೊಂದು ಪೋಸ್ಟ್ ಪ್ರಕಟಿಸಿದ ನಟಿ, ‘ಆ ಆರೋಗ್ಯವಾಗಿ ಹಾಗೂ ಸುರಕ್ಷಿತವಾಗಿ ಇದ್ದೇನೆ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ‘ನಿನ್ನ ಹುಚ್ಚಾಟ ಅತಿಯಾಯಿತು’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.