ಬೆಂಗಳೂರು: ‘ಒಕ್ಕಲಿಗ ಸಮುದಾಯದ ಎಲ್ಲಾ ಉಪಜಾತಿಗಳನ್ನು ಕೇಂದ್ರದ ಇತರ ಹಿಂದುಳಿದ ಜಾತಿಗಳ (ಒಬಿಸಿ) ಪಟ್ಟಿಯಲ್ಲಿ ಸೇರಿಸಬೇಕು’ ಎಂದು ರಾಜ್ಯಸಭೆಯ ಕಾಂಗ್ರೆಸ್ ಸದಸ್ಯ ಜಿ.ಸಿ. ಚಂದ್ರಶೇಖರ್ ಅವರು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದಾರೆ.
‘ಒಕ್ಕಲಿಗ ಸಮುದಾಯವು 54 ಉಪಜಾತಿಗಳನ್ನು ಒಳಗೊಂಡಿದ್ದು, ಬಹುತೇಕರು ಕೃಷಿಕರೇ ಆಗಿದ್ದಾರೆ. ಕರ್ನಾಟಕಕ್ಕೆ ಸಂಬಂಧಿಸಿದ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಒಕ್ಕಲಿಗ, ಸರ್ಪ ಒಕ್ಕಲಿಗ(ಗ್ರಾಮಾಂತರ ಪ್ರದೇಶ), ಉಪ್ಪಿನಕೊಳಗ ಒಕ್ಕಲಿಗ, ಗೌಡ ಮತ್ತು ಹಳ್ಳಿಕಾರ ಎಂದಷ್ಟೇ ಇದೆ.’
‘ಹೀಗಾಗಿ, ಒಕ್ಕಲಿಗ ಸಮುದಾಯದ ಎಲ್ಲಾ ಉಪಜಾತಿಗಳನ್ನೂ(ನಗರ ಪ್ರದೇಶದವರೂ ಸೇರಿ) ಒಬಿಸಿ ಪಟ್ಟಿಗೆ ಸೇರಿಸಬೇಕು. ಪಟ್ಟಿಯಲ್ಲಿ ಕೆಲವು ಅಕ್ಷರ ತಪ್ಪುಗಳೂ ಇದ್ದು, ಸರಿಪಡಿಸಲು ಸೂಚನೆ ನೀಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
‘ನಗರ ಪ್ರದೇಶದ ಒಕ್ಕಲಿಗರು ಒಬಿಸಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗಗಳ(ಇಡಬ್ಲ್ಯುಎಸ್) ಪಟ್ಟಿಯಲ್ಲಿ ಇಲ್ಲ ಎಂದು ‘ಪ್ರಜಾವಾಣಿ’ ಸೋಮವಾರ ವರದಿ ಪ್ರಕಟಿಸಿದೆ. ನಗರ ಒಕ್ಕಲಿಗರು ಈ ಪಟ್ಟಿಗಳಲ್ಲಿ ಸೇರಲು ಅರ್ಹರೇ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಅವರು ಕೋರಿದ್ದಾರೆ.