ಬೆಂಗಳೂರು: ‘ಕೊರೊನಾ ನಂತರ ಆರ್ಥಿಕವಾಗಿ ಜಗತ್ತೇ ಸಂಕಷ್ಟಕ್ಕೆ ಈಡಾಗಿದೆ. ಈಗ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮಹಿಳೆಯರು ಹೆಚ್ಚು ಕಷ್ಟ ಅನುಭವಿಸುತ್ತಿದ್ದಾರೆ’ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ (ಎಐಎಂಎಸ್ಎಸ್) ಬೆಂಗಳೂರು ಜಿಲ್ಲಾ ಸಮಿತಿ ಹೇಳಿದೆ.
‘ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದ ಮನೆ ಕೆಲಸ ಮಾಡುವ ಹೆಣ್ಣುಮಕ್ಕಳು, ಗಾರ್ಮೆಂಟ್ಸ್ ನೌಕರರು, ದಿನಗೂಲಿ ನೌಕರರು ಜೀವನ ನಡೆಸಲು ಹರಸಾಹಸ ಮಾಡಬೇಕಾಗಿದೆ’ ಎಂದು ಸಂಘಟನೆಯ ಕಾರ್ಯದರ್ಶಿ ಎ. ಶಾಂತಾ ದೂರಿದ್ದಾರೆ.
ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಬೆಲೆ ಏರಿಕೆಗೆ ಕಡಿವಾಣ ಹಾಕುವಂತೆ ಸಂಘಟನೆಯು ಕಾಲೇಜುಗಳು, ಬಡಾವಣೆ, ಉದ್ಯಾನಗಳಲ್ಲಿ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿತ್ತು. ಸಾರ್ವಜನಿಕರಿಂದ ಸಂಗ್ರಹಿಸಿದ ಸಹಿಗಳ ಪತ್ರವನ್ನು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ. ಹೇಮಾವತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಯವರ ಕಚೇರಿಗೆ ಸಲ್ಲಿಸಲಾಯಿತು.