ದಾವಣಗೆರೆ: ಬೆಂಗಳೂರಿನ ಲಿಖಿತ್ ಚಿಲ್ಕುರಿ ಮತ್ತು ಶಿವಮೊಗ್ಗದ ಕೆ.ವಿ. ವಿವೇಕ್ ನಾಯಕ್ ಅವರು ಭಾನುವಾರ ಮುಕ್ತಾಯಗೊಂಡ ಜಯದೇವ ಟ್ರೋಫಿ ಓಪನ್ ರ್ಯಾಪಿಡ್ ಚೆಸ್ ಟೂರ್ನಿಯಲ್ಲಿ ಕ್ರಮವಾಗಿ ಓಪನ್ ಮತ್ತು 16 ವರ್ಷದೊಳಗಿನವರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.
ಶಿವಯೋಗಾಶ್ರಮ ಟ್ರಸ್ಟ್ ಮತ್ತು ದಾವಣಗೆರೆ ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದಲ್ಲಿ ಶಿವಯೋಗಾಶ್ರಮದಲ್ಲಿ ನಡೆದ ಎರಡು ದಿನಗಳ ಟೂರ್ನಿಯಲ್ಲಿ ಅನುಭವಿ ಲಿಖಿತ್ (ರೇಟಿಂಗ್: 1766) ಏಳು ಸುತ್ತುಗಳಿಂದ ಏಳು ಅಂಕಗಳನ್ನು ಸಂಗ್ರಹಿಸಿ, ಅಜೇಯರಾಗುಳಿದರು.
ಅಗ್ರಶ್ರೇಯಾಂಕದ ಆಟಗಾರ ಬೆಂಗಳೂರಿನ ಎ.ಬಾಲಕಿಶನ್ (2047), ಶಿವಮೊಗ್ಗದ ಎಸ್.ಎಂ. ಅಜಯ್ (1660), ತಲಾ ಆರು ಅಂಕ ಪಡೆದರೂ ಟೈಬ್ರೇಕ್ ಆಧಾರದ ಮೇಲೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು. ಹುಬ್ಬಳ್ಳಿಯ ಶ್ರೀಪಾದ್ ಕೆ.ವಿ. (5.5) ನಾಲ್ಕನೇ ಮತ್ತು ಜಿ.ಹರೀಶ್ (5) ಐದನೇ ಸ್ಥಾನ ಪಡೆದರು. ಓಪನ್ ವಿಭಾಗದಲ್ಲಿ 58 ಆಟಗಾರರು ಭಾಗವಹಿಸಿದ್ದರು.
16 ವರ್ಷದೊಳಗಿನವರ ವಿಭಾಗದಲ್ಲಿ ವಿವೇಕ್ ನಾಯಕ್ ಏಳು ಸುತ್ತುಗಳಿಂದ ಆರೂವರೆ ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆದರು.
ದಾವಣಗೆರೆಯ ಧನುಷ್ ಎಂ.ಎಸ್., ರಾಯಚೂರಿನ ಶ್ರೀನಿಧಿ ಕುಲಕರ್ಣಿ, ಶಿವಮೊಗ್ಗದ ಯುವರಾಜ್ ಎಸ್.ಎಲಿ ತಲಾ ಆರು ಅಂಕ ಸಂಗ್ರಹಿಸಿದರೂ ಟೈಬ್ರೇಕ್ ಆಧಾರದಲ್ಲಿ ಕ್ರಮವಾಗಿ ಎರಡರಿಂದ ನಾಲ್ಕರವರೆಗಿನ ಸ್ಥಾನಗಳನ್ನು ಪಡೆದರು. ಉಡುಪಿಯ ಶ್ರೀಶ ಯು.ಎ. (5.5) ಐದನೇ ಸ್ಥಾನ ಪಡೆದರು. ಈ ವಿಭಾಗದಲ್ಲಿ ಒಟ್ಟು 74 ಆಟಗಾರರು ಸ್ಪರ್ಧಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.