ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟಿಕೆಟ್ ಎಕ್ಸಿಕ್ಯುಟಿವ್ ಕೆಲಸ ಕೊಡಿಸುವುದಾಗಿ ನಂಬಿಸಿ, ಹಣ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ವೈಟ್ಫೀಲ್ಡ್ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ವಂಚನೆ ಸಂಬಂಧ 21 ವರ್ಷದ ಯುವತಿ ದೂರು ನೀಡಿದ್ದಾರೆ. ಆರೋಪಿಗಳಾದ ನಿಧಿ, ಮನೀಶ್, ರಾಹುಲ್ ಬಾಟಿಯಾ ಹಾಗೂ ರಿಷಬ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಮುಂಬೈ ಕಚೇರಿ ಅಧಿಕಾರಿಗಳ ಸೋಗಿನಲ್ಲಿ ಯುವತಿಗೆ ಕರೆ ಮಾಡಿದ್ದ ಆರೋಪಿಗಳು, ‘ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಟಿಕೆಟ್ ಎಕ್ಸಿಕ್ಯುಟಿವ್ ಹುದ್ದೆಗೆ ಆಯ್ಕೆಯಾಗಿದ್ದಿರಿ’ ಎಂದು ಹೇಳಿದ್ದರು. ನಂತರ, ಶುಲ್ಕದ ರೂಪದಲ್ಲಿ ₹98,800 ಪಡೆದುಕೊಂಡಿದ್ದರು.’
‘ಹಲವು ದಿನವಾದರೂ ಹುದ್ದೆಯ ನೇಮಕಾತಿ ಆದೇಶ ಪ್ರತಿ ಬಂದಿರಲಿಲ್ಲ. ಕರೆ ಮಾಡಿದರೂ ಆರೋಪಿಗಳು ಸ್ವೀಕರಿಸುತ್ತಿಲ್ಲವೆಂದು ಯುವತಿ ಆರೋಪಿಸಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.