ಬೆಂಗಳೂರು: ‘ಭಾರತವು ಸಾಮರ್ಥ್ಯ ಹೊಂದಿರುವ ಅವಕಾಶಗಳ ನೆಲೆ ಹಾಗೂಉದಯೋನ್ಮುಖ ಪ್ರತಿಭೆಗಳ ಬೀಡು. ಇದರಿಂದ ಮುಂದಿನ ನಾಲ್ಕು ವರ್ಷಗಳಲ್ಲಿ ದೇಶದ ಆರ್ಥಿಕತೆ ದ್ವಿಗುಣಗೊಳ್ಳಲಿದೆ’ ಎಂದು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಅಲಯನ್ಸ್ ವಿಶ್ವವಿದ್ಯಾಲಯವು ಆನ್ಲೈನ್ ಮೂಲಕ ಶನಿವಾರ ಹಮ್ಮಿಕೊಂಡಿದ್ದ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
‘ಆತ್ಮನಿರ್ಭರ’ ಭಾರತದಿಂದ ದೇಶವು ಆಮದಿನ ಮೇಲೆ ಕಡಿಮೆ ಅವಲಂಬನೆ ಹೊಂದಲಿದೆ. ಉತ್ಪಾದನೆಗೆ ಹೆಚ್ಚಿನ ಆದ್ಯತೆ ಸಿಗಲಿದ್ದು, ಇದರಿಂದ ದೇಶದ ಅಭಿವೃದ್ಧಿಗೆ ಸಹಾಯಕವಾಗಲಿದೆ’ ಎಂದರು.
ಟ್ರ್ಯೂಬೀಕನ್ ಮತ್ತು ಜೆರೋಡಾ ಸಂಸ್ಥೆಯ ಸಹ ಸಂಸ್ಥಾಪಕ ನಿಖಿಲ್ ಕಾಮತ್,‘ವಿದ್ಯಾರ್ಥಿಗಳ ಶಿಕ್ಷಣವು ಉನ್ನತ ಶಿಕ್ಷಣದೊಂದಿಗೆ ಅಥವಾ ಪದವಿಯೊಂದಿಗೆ ಕೊನೆಗೊಳ್ಳುವುದಿಲ್ಲ. ಜ್ಞಾನ ಪಡೆಯಲು ವಯಸ್ಸಿನ ಮಿತಿ ಇಲ್ಲ. ಜೀವನದಲ್ಲಿ ನಿರಂತರವಾಗಿ ನಡೆಯುವ ಪ್ರಕ್ರಿಯೆಯೇ ಶಿಕ್ಷಣ’ ಎಂದರು.
ಹಿರಿಯ ವಕೀಲ ಡಿ.ಎನ್.ನಂಜುಂಡರೆಡ್ಡಿ,‘ವಿದ್ಯಾರ್ಥಿಗಳು ಜೀವನದ ಮಾರ್ಗ ಕಂಡುಕೊಳ್ಳುವುದು ಸವಾಲಿನ ಕೆಲಸ. ಪ್ರತಿಯೊಬ್ಬರ ಜೀವನದ ಮೇಲೂ ಶಿಕ್ಷಣ ಪರಿಣಾಮ ಬೀರುತ್ತದೆ’ ಎಂದು ಹೇಳಿದರು.
ಅಲಯನ್ಸ್ ವಿಶ್ವವಿದ್ಯಾಲಯದ ಕುಲಪತಿ ಅನುಭಾ ಸಿಂಗ್,‘ವಿಶ್ವವಿದ್ಯಾಲಯವು ಡಿಜಿಟಲ್ ತಂತ್ರಜ್ಞಾನ, ಉದಾರ ಕಲೆಗಳು ಮತ್ತು ಅನ್ವಯಿಕ ಗಣಿತ ಶಾಸ್ತ್ರದಲ್ಲಿ ಹೊಸ ಶೈಕ್ಷಣಿಕ ಘಟಕಗಳನ್ನು ರಚಿಸಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿಕೊಳ್ಳುವಲ್ಲಿ ಕಾರ್ಯೋನ್ಮುಖವಾಗಿದೆ. ಅಂತರ್ ಶಿಕ್ಷಣ ತಜ್ಞರು ಮತ್ತು ಸಂಶೋಧನೆಗಳ ಮೇಲೆ ಹೆಚ್ಚಿನ ಒತ್ತು ನೀಡುತ್ತದೆ’ ಎಂದರು.
ಘಟಿಕೋತ್ಸವದಲ್ಲಿ ಅಲಯನ್ಸ್ ವಿಶ್ವವಿದ್ಯಾಲಯದ 4,692 ಮಂದಿಗೆ ಪ್ರದವಿ ಪ್ರದಾನ ನಡೆಯಿತು. ಈ ಪೈಕಿ3,323 ಪದವಿ ವಿದ್ಯಾರ್ಥಿಗಳು, 1,351 ಡಿಪ್ಲೊಮಾದವರು, 18 ಡಾಕ್ಟರೇಟ್ ಹಾಗೂ ಅತ್ಯುನ್ನತ ಶ್ರೇಯಾಂಕ ಪಡೆದಿರುವ273 ಮಂದಿಗೆ ಪದಕ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.