ಬೆಂಗಳೂರು: ‘ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದ ಪದವೀಧರರು ಹಾಗೂ ಶಿಕ್ಷಕರಿಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ನೀಡಬೇಕು’ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆಗ್ರಹಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಎಎಪಿಬೆಂಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ, ‘ರಾಜ್ಯದಲ್ಲಿ ವಿವಿಧ ವಿಶ್ವವಿದ್ಯಾಲಯಗಳಿಂದ ವಾರ್ಷಿಕ ಮೂರು ಲಕ್ಷಕ್ಕೂ ಹೆಚ್ಚು ಪದವೀಧರರು ಹೊರಬರುತ್ತಾರೆ. ಈಗ ಹೆಸರು ನೋಂದಣಿ ಮಾಡಿಸಿಕೊಂಡಿದ್ದವರಿಗೆ ಮಾತ್ರ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ನೋಂದಣಿ ಸಾಧ್ಯವಾಗದ ಲಕ್ಷಾಂತರ ಪದವೀಧರರು ಮತದಾನದ ಹಕ್ಕಿನಿಂದ ವಂಚಿತರಾಗಲಿದ್ದಾರೆ’ ಎಂದರು.
‘ಚುನಾವಣಾ ಆಯೋಗವು ಪದವಿ ಪೂರ್ಣಗೊಳಿಸಿದವರ ಮಾಹಿತಿಯನ್ನು ವಿಶ್ವವಿದ್ಯಾಲಯಗಳಿಂದ ತರಿಸಿಕೊಂಡು, ಎಲ್ಲರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.
ಪಕ್ಷದ ಪದವೀಧರರು ಹಾಗೂ ಶಿಕ್ಷಕರ ವಿಭಾಗದ ಅಧ್ಯಕ್ಷ ಚನ್ನಬಸಪ್ಪ ರೇವಡಿ, ‘ಈಗಿನ ನಿಯಮವನ್ನು ದುರುಪಯೋಗಪಡಿಸಿಕೊಂಡು ತಮಗೆ ಬೇಕಾದವರನ್ನು ಮಾತ್ರ ಮತದಾರ ಪಟ್ಟಿಗೆ ಸೇರಿಸಿ, ಸುಲಭವಾಗಿ ಕೆಲವರು ಜಯಿಸುತ್ತಿದ್ದಾರೆ. ನಿಯಮಗಳಿಗೆ ಬದಲಾವಣೆ ತಂದರೆ ಇದಕ್ಕೆ ಕಡಿವಾಣ ಹಾಕಬಹುದು’ ಎಂದು ಹೇಳಿದರು.