ಹೆಸರಘಟ್ಟ: ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ ಅನುದಾನ ಮತ್ತು ಕಸಘಟ್ಟಪುರ ಗ್ರಾಮ ಪಂಚಾಯಿತಿಯ ಅನುದಾನದೊಂದಿಗೆ ಗುಣಿ ಅಗ್ರಹಾರ ಗ್ರಾಮದಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರವನ್ನು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ‘ಜನಸಂಖ್ಯೆ ಅನುಗುಣವಾಗಿ ಅಂಗನವಾಡಿ ಕೇಂದ್ರಗಳನ್ನು ತೆರೆಯಬೇಕಾಗಿದೆ. ಮುಂದಿನ ದಿನಗಳಲ್ಲಿ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ನೀಡುವ ಯೋಜನೆ ಕೈಗೊಳ್ಳಲಾಗುವುದು. ಮಕ್ಕಳ ಕಲಿಕೆಗೆ ಬೇಕಾದ ಆಟಿಕೆಗಳನ್ನು ಒದಗಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ’ ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್, ‘ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ನೀಡಿದ ₹5 ಲಕ್ಷಗಳ ಅನುದಾನದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದೆ. ಪಂಚಾಯಿತಿಯಿಂದ ₹3.5 ಲಕ್ಷ ವೆಚ್ಚದಲ್ಲಿ ಗೋಡೆಗೆ ಚಿತ್ರ ಮತ್ತು ಬಣ್ಣವನ್ನು ಬಳಿಯಲಾಗಿದೆ’ ಎಂದರು.