ಬೆಂಗಳೂರು: 'ಆಂದೋಲನ ನಡೆಸುವುದು ಪ್ರತಿಯೊಬ್ಬರ ಅಧಿಕಾರ. ಆದರೆ, ರಾಷ್ಟ ವಿರೋಧಿ ಪ್ರವೃತ್ತಿಯ ಆಂದೋಲನ ನಡೆಸುವರು ದೇಶದ್ರೋಹಿಗಳು' ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.
ಪುರಭವನದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಮತದಾರರ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಮಾತನ್ನು ಮಹಾತ್ಮಾ ಗಾಂಧೀಜಿ ಕೂಡ ಹೇಳಿದ್ದರು ಎಂದರು.
'ಆಂದೋಲನಗಳು ರಾಷ್ಟ್ರವನ್ನು ಸದೃಢಗೊಳಿಸುವಂತೆ ಇರಬೇಕು. ಆದರೆ, ರಾಷ್ಟ್ರದ ವಿಭಜನೆಗೆ, ಜಾತಿ, ಪಂಥಕ್ಕಾಗಿ, ಪಕ್ಷಕ್ಕಾಗಿ, ಯಾವುದೋ ವ್ಯಕ್ತಿಯ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ಇಂದು ಆಂದೋಲನಗಳು ನಡೆಯುತ್ತಿವೆ. ಆ ರೀತಿಯ ಆಂದೋಲನಗಳಲ್ಲಿ ಪಾಲ್ಗೊಳ್ಳಬೇಡಿ' ಎಂದು ಕರೆ ನೀಡಿದರು.
'ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಮೊರಾರ್ಜಿ ದೇಸಾಯಿ ಅವರು ಇಡೀ ಜೀವನವನ್ನು ರಾಷ್ಟ್ರಕ್ಕಾಗಿ ಮುಡಿಪಾಗಿಟ್ಟರು. ಅವರಿಂದ ನಾವು ಪ್ರೇರೇಪಿತರಾಗಬೇಕಿದೆ. ಅಗತ್ಯ ಬಿದ್ದಾಗ ದೇಶಕ್ಕಾಗಿ ಪ್ರಾಣ ಕೊಡಲೂ ಸಿದ್ಧರಾಗಬೇಕು' ಎಂದು ತಿಳಿಸಿದರು.