ಬೆಂಗಳೂರು: ಮಹಿಳೆಯರು ಸ್ನಾನಗೃಹ, ಶೌಚಾಲಯಕ್ಕೆ ತೆರಳಿದ ಸಂದರ್ಭದಲ್ಲಿ ಬಾಗಿಲು ತಟ್ಟಿ ವಿಕೃತಿ ಮೆರೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ವಿಲ್ಸನ್ಗಾರ್ಡನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸುಧಾಮ ನಗರದ ಕೆ.ಎಸ್. ಗಾರ್ಡನ್ ನಿವಾಸಿ, ಮೆಕ್ಯಾನಿಕ್ ಕೆಲಸ ಮಾಡುವ ಕನಕರಾಜ (28) ಬಂಧಿತ ಆರೋಪಿ. ಅಕ್ಕ-ಅಣ್ಣನ ಜೊತೆಗಿರುವ ಆರೋಪಿಗೆ ಪೋಷಕರಿಲ್ಲ.
ಆರು ತಿಂಗಳಿನಿಂದ ಆರೋಪಿ ಈ ರೀತಿ ವಿಕೃತವಾಗಿ ವರ್ತಿಸುತ್ತಿದ್ದ. ಸಾರ್ವಜನಿಕರು ಶಾಂತಿನಗರ ಕ್ಷೇಮಾಭಿವೃದ್ಧಿ ಸಂಘದ ಮೂಲಕ ವಾಟ್ಸ್ಆ್ಯಪ್ ಗ್ರೂಪ್ ಮತ್ತು ಪೊಲೀಸ್ ಠಾಣೆಯ ವಾಟ್ಸ್ಆ್ಯಪ್ ಗ್ರೂಪ್ ಮಾಡಿಕೊಂಡು ಈ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಒಂದು ತಿಂಗಳ ಹಿಂದೆ ಕೆಲವರು ತಮ್ಮ ಮನೆಯ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು.
ಆರೋಪಿಯು ಸಾಫ್ಟ್ವೇರ್ ಉದ್ಯೋಗಿಯೊಬ್ಬರ ಮನೆಯ ಮೊದಲ ಮಹಡಿಗೆ ಹತ್ತಿ ಹೋಗುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ತಕ್ಷಣ ಈ ಬಗ್ಗೆ ವಾಟ್ಸ್ಆ್ಯಪ್ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಆರೋಪಿ ಅ. 13ರಂದು ಇದೇ ರೀತಿ ಕೃತ್ಯ ಎಸಗಲು ಮುಂದಾದಾಗ ಸ್ಥಳೀಯರೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
‘ಮಹಿಳೆಯರಿದ್ದ ಮನೆಯ ಶೌಚಾಲಯದ ಮತ್ತು ಸ್ನಾನಗೃಹದ ಕಿಟಕಿಯ ಬಾಗಿಲು ತಟ್ಟಿ ಆರೋಪಿ ಶಬ್ದ ಮಾಡುತ್ತಿದ್ದ. ಹೀಗಾಗಿ, ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.