ಬೆಂಗಳೂರು: ಮನೆಗಳಲ್ಲಿ ಕಳವು ಮಾಡಿದ್ದ ಚಿನ್ನವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ನೇಪಾಳದ ರಾಮ್ ಬಹದ್ದೂರ್ (48) ಹಾಗೂ ಕಮಲ್ರಾಜ್ (20) ಬಂಧಿತರು. ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಆರೋಪಿಗಳು, ಗೋವಿಂದಪುರದಲ್ಲಿ ವಾಸವಿದ್ದರು. ಅವರಿಂದ ₹ 2 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಆರೋಪಿಗಳು, ಬೀಗ ಹಾಕಿರುತ್ತಿದ್ದ ಹಾಗೂ ಅಂಗಳದಲ್ಲಿ ಕಸ ಬಿದ್ದಿರುತ್ತಿದ್ದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದರು. ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯ ಎರಡು ಮನೆಗಳಲ್ಲಿ ಇವರು ಕೃತ್ಯ ಎಸಗಿದ್ದರು’ ಎಂದೂ ತಿಳಿಸಿದರು.
‘ಶಿರಡಿ ಸಾಯಿನಗರದ ಮನೆಯೊಂದರ ಬಾಗಿಲು ಲಾಕ್ ಮುರಿದು ಕಳ್ಳತನ ಮಾಡಿದ್ದರು. ₹40 ಸಾವಿರ ನಗದು, 7 ವಾಚ್ ಕದ್ದಿದ್ದರು. ಈ ಬಗ್ಗೆ ದೂರು ದಾಖಲಾಗಿತ್ತು.’
‘ಏಪ್ರಿಲ್ 9ರಂದು ಸಂಜೆ ಮಾರತ್ತಹಳ್ಳಿ ಮೇಲ್ಸೇತುವೆ ಬಳಿ ನಿಂತಿದ್ದ ಆರೋಪಿಗಳು, ತಮ್ಮ ಬಳಿ ಇದ್ದ ಚಿನ್ನದ ಸರವನ್ನು ಸಾರ್ವಜನಿಕರಿಗೆ ಮಾರಲು ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಅವರಿಬ್ಬರನ್ನು ಬಂಧಿಸಲಾಯಿತು’ ಎಂದೂ ಹೇಳಿದರು.