ಬೆಂಗಳೂರು: ಉಪಚುನಾವಣೆ ಹಿನ್ನೆಲೆಯಲ್ಲಿ ಮಹಾಲಕ್ಷ್ಮೀ ಲೇಔಟ್ ಮುನೇಶ್ವರ ಬ್ಲಾಕ್ನಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದ ಇಬ್ಬರು ಜೆಡಿಎಸ್ ಕಾರ್ಯಕರ್ತರನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ಜೆಡಿಎಸ್ ಕಾರ್ಯಕರ್ತರಾದ ಗಂಗಾಧರಯ್ಯ (50) ಹಾಗೂ ನಾಗೇಂದ್ರ (30) ಬಂಧಿತರು. ಆರೋಪಿಗಳಿಂದ ₹ 30,100 ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಆರೋಪಿಗಳು ಬುಧವಾರ ಮಧ್ಯಾಹ್ನ ಮತದಾರರಿಗೆ ಹಣ ಹಂಚುತ್ತಿದ್ದರು. ಮತದಾರರ ಪಟ್ಟಿಯಲ್ಲಿ ಹೆಸರಿರುವವರನ್ನು ಗುರುತಿಸಿ ಒಬ್ಬೊಬ್ಬ ಮತದಾರನಿಗೆ ಆರೋಪಿಗಳು ತಲಾ ₹ 500 ಹಂಚುತ್ತಿದ್ದರು. ಪೊಲೀಸರು ಬಂಧಿಸುವುದಕ್ಕೂ ಮೊದಲು ಆರೋಪಿಗಳು ₹ 20 ಸಾವಿರ ಹಣವನ್ನು ಮತದಾರರಿಗೆ ಹಂಚಿದ್ದರು ಎನ್ನಲಾಗಿದೆ.
ಹಣ ಹಂಚುತ್ತಿದ್ದ ವಿಚಾರವನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದೂ ಪೊಲೀಸರು ಹೇಳಿದರು.