ಬೆಂಗಳೂರು: ನರೇಂದ್ರ ಮೋದಿ ಅವರನ್ನು 2013ರಲ್ಲಿ ಪ್ರಧಾನಿ ಅಭ್ಯರ್ಥಿ ಎಂಬುದಾಗಿ ಬಿಂಬಿಸಿದ್ದೇ ಅರುಣ್ ಜೇಟ್ಲಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ವಿದ್ಯಮಾನ ವೇದಿಕೆ ಸಹಯೋಗದಲ್ಲಿ ಬುಧವಾರ ಇಲ್ಲಿ ನಡೆದ ಜೇಟ್ಲಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಭವಿಷ್ಯದ ಬಗ್ಗೆ ಗಂಭೀರ ಚಿಂತನೆ ಮಾಡುವ ಸಾಮರ್ಥ್ಯ ಇದ್ದ ಅವರು, ತಮಗೆ ಬಂದ ಅವಕಾಶವನ್ನು ನರೇಂದ್ರ ಮೋದಿ ಅವರಿಗೆ ಬಿಟ್ಟುಕೊಟ್ಟರು ಎಂದರು.
ವಿದ್ಯಮಾನ ವೇದಿಕೆಯ ಅಧ್ಯಕ್ಷ ರಾಜಾ ಶೈಲೇಶಚಂದ್ರ ಗುಪ್ತ ಮಾತನಾಡಿ, ಉದ್ಯಮಗಳ ಜೀವ ಉಳಿಸುವ ದಿವಾಳಿ ಕಾನೂನನ್ನು (ಬ್ಯಾಂಕ್ರಪ್ಸಿ ಲಾ) ಜಾರಿಗೆ ತರುವ ಮೂಲಕ ಜೇಟ್ಲಿ ಅವರು ದೇಶಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ವಕೀಲ ದಿವಾಕರ್ ಮಾತನಾಡಿ, ನ್ಯಾಯಮೂರ್ತಿಗಳ ನೇಮಕಾತಿಯ ರಾಷ್ಟ್ರೀಯ ಆಯೋಗ (ಎನ್ಜೆಎಸಿ) ರಚನೆಯ ಬಹುದೊಡ್ಡ ಕನಸನ್ನು ಜೇಟ್ಲಿ ಕಂಡಿದ್ದರು, ಅದು ಈಡೇರಲೇ ಇಲ್ಲ ಎಂದು ವಿಷಾದಿಸಿದರು.
ಸಮಾಜ ಸೇವಕ ಎಂ.ಪಿ.ಕುಮಾರ್ ಅವರು ತಮ್ಮ ಮತ್ತು ಜೇಟ್ಲಿ ನಡುವಣ ಒಡನಾಟದ ಬಗ್ಗೆ ತಿಳಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್.ಸಿಂಧ್ಯ ಅವರು ಜೇಟ್ಲಿ ನೀಡಿದ ಕೊಡುಗೆಯನ್ನು ಸ್ಮರಿಸಿದರು.