ಬೆಂಗಳೂರು: ತಮ್ಮ ಊರುಗಳಿಗೆ ಹಿಂತಿರುಗಲು ರೈಲು ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಬಿಹಾರ ಹಾಗೂ ಒಡಿಶಾದ ವಲಸೆ ಕಾರ್ಮಿಕರು ಮಾದನಾಯಕನ ಹಳ್ಳಿ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದ ಬಳಿ ಕಲ್ಲು ತೂರಾಟ ನಡೆಸಿದ ಘಟನೆ ಸೋಮವಾರ ನಡೆದಿದೆ.
ಕಲ್ಲುತೂರಾಟದಲ್ಲಿ ಪೀಣ್ಯ ಇನ್ಸ್ಪೆಕ್ಟರ್ ಮುದ್ದುರಾಜ್ ಅವರ ತಲೆಗೆ ಏಟು ಬಿದ್ದಿದೆ. ನಗರದಲ್ಲಿ ಕೂಲಿ ಕೆಲಸ ಮಾಡಲು ಬಂದಿರುವ ಕಾರ್ಮಿಕರು ಕೋವಿಡ್ ವೈರಾಣು ಹರಡಲಾರಂಭಿಸಿದ ಬಳಿಕ ತಮ್ಮ ಊರುಗಳಿಗೆ ಹಿಂತಿರುಗಲು ಪರದಾಡುತ್ತಿದ್ದಾರೆ.
ರಾಜ್ಯದ ಬೇರೆ ಬೇರೆ ಭಾಗಗಳಿಗೆ ಹೋಗಲು ಸರ್ಕಾರ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ. ಅದೇ ರೀತಿ ತಮ್ಮ ಊರುಗಳಿಗೆ ಹೋಗಲು ರೈಲು ಒದಗಿಸುವಂತೆ ಆಗ್ರಹಿಸಿ ಈ ಕಾರ್ಮಿಕರು ಗಲಾಟೆ ಮಾಡಿದರು.
ಗಲಾಟೆ ನಿಯಂತ್ರಿಸಲು ಪ್ರಯತ್ನಿಸಿದ ಪೊಲೀಸರ ಮೇಲೆ ಕಾರ್ಮಿಕರು ಕಲ್ಲು ತೂರಾಟ ನಡೆಸಿದರು. ಇದರಿಂದಾಗಿ ನಗರದಿಂದ ನೆಲಮಂಗಲಕ್ಕೆ ಹೋಗುವ ಮಾರ್ಗ ಬಂದ್ ಆಗಿತ್ತು.