ಬೆಂಗಳೂರು: ಕರ್ನಾಟಕ ರಾಜ್ಯ ಹಣಕಾಸು ನಿಗಮವು (ಕೆಎಸ್ಎಫ್ಸಿ) ಸೇವಾ ಕ್ಷೇತ್ರದಲ್ಲಿನ ಮಹಿಳಾ ಉದ್ಯಮಿಗಳಿಗೆ ನೀಡುತ್ತಿರುವ ಶೇಕಡ 4ರ ಬಡ್ಡಿದರದ ಸಾಲ ಸೌಲಭ್ಯವನ್ನು ಉತ್ಪಾದನಾ ಕ್ಷೇತ್ರಕ್ಕೂ ವಿಸ್ತರಿಸುವ ಚಿಂತನೆ ನಡೆಸಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಾ. ಏಕರೂಪ್ ಕೌರ್ ತಿಳಿಸಿದರು.
ನಗರದಲ್ಲಿ ಇತ್ತೀಚೆಗೆ ಕೆಎಸ್ಎಫ್ಸಿ ಹಮ್ಮಿಕೊಂಡಿದ್ದ ಉದ್ದಿಮೆದಾರರ ಸಭೆಯಲ್ಲಿ ಮಾತನಾಡಿ, ‘ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡು ವುದಕ್ಕಾಗಿ ರಾಜ್ಯ ಸರ್ಕಾರ ಬಡ್ಡಿ ಸಹಾಯಧನದ ಸೌಲಭ್ಯವುಳ್ಳ ಸಾಲ ಒದ ಗಿಸುತ್ತಿದೆ. ಪಡೆದ ಸಾಲವನ್ನು ಸರಿಯಾಗಿ ಬಳಸಿಕೊಂಡು ಅಭಿವೃದ್ಧಿ ಹೊಂದುವ ಮುತುವರ್ಜಿ ವಹಿಸಬೇಕು’ ಎಂದರು.
ಕೆಎಸ್ಎಫ್ಸಿ ಕಾರ್ಯನಿರ್ವಾಹಕ ನಿರ್ದೇಶಕ ಎನ್. ವೆಂಕಟೇಶ್ ಮಾತನಾಡಿ, ‘ಕೋವಿಡ್ ಸಂಕಷ್ಟದ ಅವಧಿಯಲ್ಲಿ ನಿಗಮವು ₹ 670 ಕೋಟಿಯಷ್ಟು ಸಾಲವನ್ನು ಮರು ಹೊಂದಾಣಿಕೆ ಮಾಡಿದೆ ಎಂದರು.
ನಿಗಮದ ಪ್ರಧಾನ ವ್ಯವಸ್ಥಾಪಕ ಕಿಶೋರ್ ಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಎನ್. ಸುರೇಶ್, ನರೇಂದ್ರ ಬಾಬು, ನಿಗಮದ ಬೆಂಗಳೂರು ಗ್ರಾಮಾಂತರ ಮತ್ತು ಕೇಂದ್ರ ಶಾಖೆಗಳ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ವೈ.ಕೆ. ಬಸವರಾಜು, ಬಿ.ಎನ್. ಪ್ರಸಾದ್ ಸಭೆಯಲ್ಲಿದ್ದರು.